Home News ಮೊದಲು ಕಾಗದದ ಮೇಲೆ ಚಿತ್ರ ಮಾಡಿಟ್ಟುಕೊಳ್ಳಿ: ಉದಯೋನ್ಮುಖ ನಿರ್ದೇಶಕರಿಗೆ ರಾಹುಲ್‌ ರವೀಂದ್ರನ್‌ ಸಲಹೆ

ಮೊದಲು ಕಾಗದದ ಮೇಲೆ ಚಿತ್ರ ಮಾಡಿಟ್ಟುಕೊಳ್ಳಿ: ಉದಯೋನ್ಮುಖ ನಿರ್ದೇಶಕರಿಗೆ ರಾಹುಲ್‌ ರವೀಂದ್ರನ್‌ ಸಲಹೆ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು ಚಿತ್ರೋತ್ಸವ ವೇದಿಕೆ: ನಿರ್ದೇಶಕರು ಚಿತ್ರೀಕರಣ ಸ್ಥಳಕ್ಕೆ ಹೋಗಿ ಏನು ಚಿತ್ರೀಕರಣ ಮಾಡಬೇಕು ಎಂದು ಯೋಚಿಸುವ ಬದಲು, ಮೊದಲು ಎಲ್ಲವನ್ನೂ ಬರೆದಿಟ್ಟುಕೊಳ್ಳಬೇಕು. ಕಾಗದದ ಮೇಲೆ ಮೊದಲು ಚಿತ್ರ ಮಾಡಿಟ್ಟುಕೊಂಡರೆ, ಕೊನೆಯಲ್ಲಿ ಚಿತ್ರವನ್ನು ಕಟ್‌ ಮಾಡುವುದಕ್ಕೆ ಕಷ್ಟವಾಗುವುದಿಲ್ಲ ಎಂದು ಜನಪ್ರಿಯ ನಟ-ನಿರ್ದೇಶಕ ರಾಹುಲ್‌ ರವೀಂದ್ರನ್‌ ಅಭಿಪ್ರಾಯಪಟ್ಟಿದ್ದಾರೆ.

೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದ ʼಮಾಸ್ಟರ್‌ ಕ್ಲಾಸ್‌ʼ ವಿಭಾಗದಲ್ಲಿ ಭಾಗವಹಿಸಿ ಮಾತನಾಡಿದ ʼದಿ ಗರ್ಲ್‌ಫ್ರೆಂಡ್‌ʼ ಚಿತ್ರದ ನಿರ್ದೇಶಕ ರಾಹುಲ್‌ ರವೀಂದ್ರನ್‌, ʼಸಿನಿಮಾ ಎನ್ನುವುದು ಬಹಳ ದುಬಾರಿಯಾದ ಕಲಾ ಮಾಧ್ಯಮ. ಇಲ್ಲಿ ದಕ್ಷತೆ ಬಹಳ ಮುಖ್ಯ. ಒಂದು ಚಿತ್ರಕ್ಕೆ ಎಷ್ಟು ಮುಖ್ಯವೋ ಅಷ್ಟನ್ನು ಚಿತ್ರೀಕರಣ ಮಾಡಬೇಕು. ಸುಮ್ಮನೆ ಎರಡು ಚಿತ್ರಗಳಿಗಾಗುವಷ್ಟು ಚಿತ್ರೀಕರಣ ಮಾಡಿ, ನಂತರ ಒಂದು ಚಿತ್ರಕ್ಕಾಗುವಷ್ಟು ಮಾತ್ರ ಇಟ್ಟುಕೊಂಡರೆ, ಇನ್ನೊಂದು ಚಿತ್ರಕ್ಕಾಗುವ ಶ್ರಮ, ಹಣ, ಸಮಯ ಎಲ್ಲವೂ ವ್ಯರ್ಥವಾಗುತ್ತದೆ. ಇದರಿಂದ ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗುತ್ತದೆ. ಹಾಗಾಗಿ, ಚಿತ್ರೀಕರಣಕ್ಕೆ ಹೋಗುವುದಕ್ಕೆ ಮೊದಲು ಒಂದು ಬೌಂಡ್‌ ಸ್ಕ್ರಿಪ್ಟ್‌ ಬಹಳ ಮುಖ್ಯʼ ಎಂದು ಅವರು ಅಭಿಪ್ರಾಯಪಟ್ಟರು.

ಕೆಲವರು ಚಿತ್ರೀಕರಣಕ್ಕೆ ಹೋದರೂ ಅವರ ಬಳಿ ಸಂಭಾಷಣೆಗಳಿರುವುದಿಲ್ಲವಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ʼಸುಕುಮಾರ್‌ರಂತಹ ನಿರ್ದೇಶಕರು ಚಿತ್ರೀಕರಣಕ್ಕೆ ಹೋಗಿ ದೃಶ್ಯಗಳನ್ನು ಮತ್ತು ಸಂಭಾಷಣೆಗಳನ್ನು ಬರೆದು ಗೆದ್ದ ಉದಾಹರಣೆಗಳಿವೆ. ಆದರೆ, ಅದಕ್ಕೂ ಮೊದಲು ಅವರದ್ದು ಒಂದಿಷ್ಟು ತಯಾರಿಗಳಿರುತ್ತವೆ. ಚಿತ್ರೀಕರಣ ಸ್ಥಳಕ್ಕೆ ಹೋಗಿ ಉತ್ತಮಪಡಿಸಿಕೊಳ್ಳುತ್ತಾರೆʼ ಎಂದು ಹೇಳಿದರು.

ಒಬ್ಬ ಒಳ್ಳೆಯ ನಿರ್ದೇಶಕರಿಗೆ ಇರಬೇಕಾದ ಒಂದಿಷ್ಟು ಲಕ್ಷಣಗಳು ಕುರಿತು ಮಾತನಾಡಿದ ಅವರು, ʼಪ್ರಮುಖವಾಗಿ ಒಬ್ಬ ನಿರ್ದೇಶಕರಿಗೆ ತಮ್ಮ ಚಿತ್ರತಂಡದವರ ಬಗ್ಗೆ ಸಹಾನುಭೂತಿ ಇರಬೇಕು. ಕೆಲವರು ಚಿತ್ರೀಕರಣ ಮಾಡುವಾಗ ಸಾಕಷ್ಟು ಕೂಗಾಡುತ್ತಾರೆ. ನಾವು ಯುದ್ಧ ಮಾಡುತ್ತಿಲ್ಲ. ಚಿತ್ರೀಕರಣ ಮಾಡುವಾಗ ತಾಳ್ಮೆ ಇರಬೇಕು. ಇನ್ನು, ಚಿತ್ರೀಕರಣ ಸ್ಥಳದಲ್ಲಿ ಎಲ್ಲರನ್ನೂ ಸಮನಾಗಿ ನೋಡಬೇಕು. ಎಲ್ಲರಿಗೂ ಘನತೆ ಮತ್ತು ಆತ್ಮಗೌರವಗಳಿರುತ್ತವೆ ಯಾರನ್ನೂ ಕೀಳಾಗಿ ನೋಡಬಾರದು. ಎಲ್ಲರನ್ನೂ ಸಹಾನುಭೂತಿಯಿಂದ ನೋಡಬೇಕುʼ ಎಂದು ಅಭಿಪ್ರಾಯಪಟ್ಟರು.

ಲತಾ ಶ್ರೀನಿವಾಸನ್‌ ನಡೆಸಿಕೊಟ್ಟ ಈ ಸಂವಾದದಲ್ಲಿ ರಾಹುಲ್‌, ʼದಿ ಗರ್ಲ್‌ಫ್ರೆಂಡ್‌ʼ ಸೇರಿದಂತೆ ತಮ್ಮ ನಿರ್ದೇಶನದ ಚಿತ್ರಗಳು ರೂಪುಗೊಂಡ ಬಗ್ಗೆ ವಿವರಿಸಿದರು.