Home Entertainment ಪ್ರತೀ ಐಡಿಯಾಗೂ ಒಂದು ಕೊನೆ ಇರುತ್ತದೆ ಎಂದ ‘ಟೇಕ್ ಆಫ್’ ನಿರ್ದೇಶಕ

ಪ್ರತೀ ಐಡಿಯಾಗೂ ಒಂದು ಕೊನೆ ಇರುತ್ತದೆ ಎಂದ ‘ಟೇಕ್ ಆಫ್’ ನಿರ್ದೇಶಕ

Hindu neighbor gifts plot of land

Hindu neighbour gifts land to Muslim journalist

೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ನಿರ್ದೇಶಕ ಮಹೇಶ್‌ ನಾರಾಯಣನ್ ಅಭಿಮತ

ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಎಲ್ಲರೂ ಅವರವರ ದೃಷ್ಟಿಕೋನದಲ್ಲಿಯೇ ಒಂದು ವಿಚಾರವನ್ನು ನೋಡುತ್ತಿರುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಿರುತ್ತಾರೆ. ಸಿನಿಮಾ ಕೂಡ ನಿರ್ದೇಶಕ ಯಾವುದೋ ಒಂದು ವಿಚಾರಕ್ಕೆ ತೋರುವ ಪ್ರತಿರೋಧವೇ. ನನ್ನ ಬಹುತೇಕ ಸಿನಿಮಾಗಳಿಗೆ ಸೆನ್ಸಾರ್ ಸಮಸ್ಯೆ ಆಗಿದೆ. ವಿದೇಶಗಳಲ್ಲಿಯೂ ಸೆನ್ಸಾರ್ ಸಮಸ್ಯೆ ಆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಿರ್ದೇಶಕರಿಗೂ ಸ್ವಾತಂತ್ರ್ಯ ಕೊಡಬೇಕು ಎಂದು ನಾನು ಭಾವಿಸುತ್ತೇನೆʼ ಎಂದು ‘ಟೇಕ್ ಆಫ್ʼ, ‘ಸೀ ಯೂ ಸೂನ್ʼ ಮುಂತಾದ ಜನಪ್ರಿಯ ಮಲಯಾಳಂ ಸಿನಿಮಾಗಳ ನಿರ್ದೇಶಕ ಮಹೇಶ್ ನಾರಾಯಣನ್ ಹೇಳಿದರು.

೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದ ʼರೀಥಿಂಕ್‌ ನರೇಟಿವ್‌ʼ ಎಂಬ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼನಾನು ಇರಾನ್ ಚಿತ್ರೋತ್ಸವಕ್ಕೆ ಹೋದಾಗ ಖ್ಯಾತ ನಿರ್ದೇಶಕ ಜಾಫರ್ ಫನಾಹಿ ಕುರಿತು ಅವರಿಗೆ ಸಮಸ್ಯೆಯಾಗುತ್ತಿದೆ ಎಂದು ಮಾತನಾಡಿದೆ. ಆದರೆ, ಅಲ್ಲಿನವರು ಅಲ್ಲಗಳೆದರು. ನೀವು ಪಾಶ್ಚಿಮಾತ್ಯ ಮಾಧ್ಯಮಗಳ ಕಣ್ಣಿಂದ ಇಲ್ಲಿನ ಕತೆ ತಿಳಿದುಕೊಳ್ಳುತ್ತೀರಿ. ಆದರೆ ವಾಸ್ತವವೇ ಬೇರೆ ಇರುತ್ತದೆ. ಎಲ್ಲರೂ ಅವರವರ ಲೆನ್ಸ್ ಗಳಿಂದ ಪರಿಸ್ಥಿತಿ ನೋಡುತ್ತಾರೆ, ಬೇರೆ ಲೆನ್ಸ್ ಗಳಿಂದ ನೋಡುವುದು ಸಾಧ್ಯವಾಗಬೇಕುʼ ಎಂದು ಹೇಳಿದರು.

ವಿಜಯ್ ಅವರ ʼಜನನಾಯಗನ್ʼ ಚಿತ್ರಕ್ಕೆ ಎದುರಾಗಿರುವ ಸೆನ್ಸಾರ್ ಸಮಸ್ಯೆಯ ಕುರಿತು ಮಾತನಾಡಿದ ಅವರು, ‘ಬಹಳ ಹಿಂದೆ ಚುನಾವಣೆ ಸಂದರ್ಭದಲ್ಲಿ ಎಂ.ಜಿ. ರಾಮಚಂದ್ರನ್‌ ಅವರ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆಗ ಡಿಎಂಕೆ ಪಕ್ಷದ ಕಾರ್ಯಕರ್ತರು ಆ ಸಿನಿಮಾವನ್ನು ನಿಷೇಧಿಸಬೇಕು ಎಂದು ಹೇಳಿದರಂತೆ. ಆದರೆ, ಕರುಣಾನಿಧಿಯವರು ಸಿನಿಮಾ ಹಿನ್ನೆಲೆಯವರು. ಘನತೆಯಿಂದ ನಿರ್ವಹಿಸಿದರು. ಎರಡು ಗಂಟೆಯ ಸಿನಿಮಾ ನೋಡಿ ನಮ್ಮ ಪಕ್ಷದವರು ನಮ್ಮಿಂದ ದೂರ ಹೋಗುತ್ತಾರೆ ಎಂದರೆ ಈ ಪಕ್ಷವನ್ನು ನಿಲ್ಲಿಸುವುದು ಒಳ್ಳೆಯದು ಎಂದರಂತೆ. ಸಿನಿಮಾ ಬೇರೆ ಮತ್ತು ರಾಜಕೀಯ ಬೇರೆ. ಅದನ್ನು ಅರ್ಥ ಮಾಡಿಕೊಳ್ಳಬೇಕುʼ ಎಂದು ಹೇಳಿದರು.

ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ನಟಿಸಿರುವ, ಅವರು ನಿರ್ದೇಶಿಸುತ್ತಿರುವ ‘ಪೇಟ್ರಿಯಾಟ್ʼ ಸಿನಿಮಾ ಕುರಿತು ಮಾತನಾಡಿದ ಅವರು, ‘ನಾನು ಅವರೆಲ್ಲಾ ಸ್ಟಾರ್ ಗಳು ಅನ್ನುವ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಲ್ಲ. ನನ್ನ ಕಥೆ ಹೇಳುವುದಕ್ಕೆ ಆ ಕಲಾವಿದರು ಸೂಕ್ತ ಎಂಬ ಕಾರಣಕ್ಕೆ ಅವರನ್ನು ತಲುಪಿದೆ. ಅವರು ಕೂಡ ಕಲಾವಿದರಂತೆಯೇ ಸೆಟ್‌ಗೆ ಬರುತ್ತಾರೆʼ ಎಂದು ಹೇಳಿದರು.

ಬರವಣಿಗೆ ಪ್ರಕ್ರಿಯೆಯ ಕುರಿತು ವಿವರಿಸಿದ ಅವರು, ‘ಎಲ್ಲಾ ಐಡಿಯಾಗಳಿಗೂ ಎಕ್ಸ್ಪೈರಿ ಡೇಟ್ ಇರುತ್ತದೆ. ಹಾಗಾಗಿ ಆರು ತಿಂಗಳಿಗೊಮ್ಮೆ ಚಿತ್ರಕತೆಯನ್ನು ಮರುಭೇಟಿ ಮಾಡಬೇಕು. ತಿದ್ದಬೇಕು. ಚಿತ್ರಕಥೆ ಕಾಲಕ್ಕೆ ತಕ್ಕಂತೆ ಬೆಳೆಯುತ್ತಾ ಹೋಗಬೇಕು. ಬರಹಗಾರನ ಜೊತೆ ಚಿತ್ರಕಥೆ ಸಂವಾದ ಮಾಡಬೇಕು. ನಾನು ನನ್ನನ್ನು ಕಲಕಿದ ವಾಸ್ತವ ಘಟನೆಗಳನ್ನು ಇಟ್ಟುಕೊಂಡು ಕತೆ ಬರೆಯುತ್ತೇನೆ. ಅದನ್ನು ಬೆಳೆಸುತ್ತೇನೆ. ನನ್ನ ಜೊತೆ ಆ ಘಟನೆಯನ್ನೂ ಪಾತ್ರಗಳನ್ನೂ ಇಟ್ಟುಕೊಳ್ಳುತ್ತೇನೆ. ಅದು ಬೆಳೆಯುತ್ತಾ ಸಿನಿಮಾ ಆಗುತ್ತದೆʼ ಎಂದು ಹೇಳಿದರು.

ವಾಸ್ತವವನ್ನು ಸಿನಿಮಾಗೆ ತರುವ ಪ್ರಕ್ರಿಯೆ ಕುರಿತು ಅವರು, ‘ನಾನು ಮೂಲಕ್ಕೆ, ವಾಸ್ತವಕ್ಕೆ, ಪಾತ್ರಗಳಿಗೆ ನಿಷ್ಠವಾಗಿರಲು ಬಯಸುತ್ತೇನೆ. ಆದರೆ, ಎಷ್ಟೆಂದರೂ ಸಿನಿಮಾ ನಿಜವಲ್ಲ. ಅದು ಸುಳ್ಳು. ಕಲ್ಪನೆ. ನಾನು ಸುಳ್ಳು ಹೇಳುತ್ತಿದ್ದೇನೆ ಎಂಬುದು ನನಗೆ ಗೊತ್ತಿರಬೇಕು. ಆದರೆ ವಾಸ್ತವಕ್ಕೆ ಹತ್ತಿರದ ಸುಳ್ಳು ಹೇಳಬೇಕು. ಅದರಲ್ಲೂ ಆ ಒಂದು ಘಟನೆಯಲ್ಲಿ ನನ್ನನ್ನು ತೀವ್ರವಾಗಿ ಕಲಕಿದ್ದು ಯಾವುದಿದೆಯೇ ಅದನ್ನೇ ನಾನು ದಾಟಿಸಲು ಯತ್ನಿಸುತ್ತೇನೆʼಎಂದು ಹೇಳಿದರು.

ʼಫಹಾದ್ ಫಾಸಿಲ್, ಕುಂಚಕೋ ಬೊಬನ್ ತರಹದ ನಟರ ಜೊತೆ ನಾನು ಮತ್ತೆ ಮತ್ತೆ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದ ಅವರು, ʼಅವರೊಳಗಿನ ಬೇರೆ ಬೇರೆ ಆಯಾಮಗಳನ್ನು ಹೊರತರಲು ಯತ್ನಿಸುತ್ತೇನೆ. ನನ್ನ ಸಿನಿಮಾಗಳನ್ನು ನೋಡಿದರೆ ಎಲ್ಲಾ ಸಿನಿಮಾಗಳಲ್ಲೂ ಬೇರೆ ಬೇರೆ ಫಹಾದ್ ಕಾಣಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

ʼನಾನು ಸಿನಿಮಾದ ಕೊನೆಯ ಇಮೇಜ್ ಅನ್ನು ಕಲ್ಪಿಸಿಕೊಂಡು ಆಮೇಲೆ ಉಳಿದ ಬರವಣಿಗೆ ಮಾಡುತ್ತೇನೆ. ಇಲ್ಲದಿದ್ದರೆ ನನಗೆ ಬರೆಯಲಾಗುವುದಿಲ್ಲ. ಆಮೇಲೆ ಆ ಇಮೇಜ್ ಬದಲಾಗಬಹುದು. ಆದರೆ, ಇಮೇಜ್ ತಲೆಯಲ್ಲಿ ಇರಬೇಕು. ಜೊತೆಗೆ ಪ್ರೇಕ್ಷಕರನ್ನು ತಲೆಯಲ್ಲಿ ಇಟ್ಟುಕೊಂಡೇ ಬರೆಯುತ್ತೇನೆ. ಅವರು ಡಿಸ್ ಕನೆಕ್ಟ್ ಆಗದಂತೆ ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ನನ್ನ ಉದ್ದೇಶ’ ಎಂದು ಹೇಳಿದರು.

ಈ ಸಂವಾದವನ್ನು ವಿಶಾಲ್ ಶಿಂಧೆ ನಡೆಸಿಕೊಟ್ಟರು.