Mysore Zoo: ಮೃಗಾಲಯಕ್ಕೆ 1.56 ಲಕ್ಷ ಮಂದಿ ಭೇಟಿ : 191.37 ಲಕ್ಷ ಆದಾಯ ಸಂಗ್ರಹ : ಕಳೆದ ಬಾರಿಗಿಂತ ಜನ ಕಮ್ಮಿ, ಆದಾಯ ಜಾಸ್ತಿ

Share the Article

Mysore Zoo: ಮೈಸೂರು ಮೃಗಾಲಯಕ್ಕೆ ನವರಾತ್ರಿ ವೇಳೆ, 10 ದಿನದಲ್ಲಿ 1.56 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 191.37 ಲಕ್ಷ ರೂ. ಪ್ರವೇಶ ಶುಲ್ಕ ಸಂಗ್ರಹ ವಾಗಿದ್ದರೆ, ಆಯುಧಪೂಜೆ ದಿನ 27,033 ಮಂದಿ, ಜಂಬೂ ಸವಾರಿ ದಿನ 27,272 ಪ್ರವಾಸಿಗರು ಸಂದರ್ಶಿಸಿದ್ದಾರೆ.

ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಮೃಗಾಲಯಕ್ಕೆ ದಸರಾ ವೇಳೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ 10 ಸಾವಿರ ದಷ್ಟು ಕಡಿತವಾಗಿದೆ. ಆದರೆ, ಪ್ರವೇಶ ಶುಲ್ಕ ಹೆಚ್ಚಳದಿಂದಾಗಿ ಸಂಗ್ರಹವಾದ ಆದಾಯದಲ್ಲಿ ಮಾತ್ರ ಹೆಚ್ಚಳವಾಗಿದೆ. 2021ರಲ್ಲಿ ಅರಮನೆ ಆವರಣಕ್ಕೆ ಸೀಮಿತವಾದ ದಸರಾ ವೇಳೆ 10 ದಿನದಲ್ಲಿ ಹರಿದುಬಂದಿದೆ.

ಹಾಗಾಗಿ ವಿವಿಧ ಪ್ರವಾಸಿತಾಣಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಅರಮನೆ, ಮೈಸೂರು ಮೃಗಾಲಯ, ಚಾಮುಂಡಿಬೆಟ್ಟ, ನಂಜನಗೂಡು, ಕೆಟರ್‌ಎಸ್ ಜಲಾಶಯ, ಶ್ರೀರಂಗಪಟ್ಟಣ, ನಿಮಿಷಾಂಬ ದೇವಸ್ಥಾನ ಸೇರಿದಂತೆ ವಿವಿಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ದಸರಾ ವೇಳೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಚಾಮುಂಡಿಬೆಟ್ಟಕ್ಕೆ 6 ಲಕ್ಷ ಪ್ರವಾಸಿಗರ ಭೇಟಿ: ನವರಾತ್ರಿ ವೇಳೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ದಿನಕ್ಕೊಂದು ಅಲಂಕಾರ ಮಾಡಲಾಗಿದ್ದು, ಈ ವೇಳೆ ದೇವಿ ದರ್ಶನ ಪಡೆದರೆ ಶುಭವಾಗಲಿದೆ ಎಂಬ ಪ್ರತೀತಿ ಇರುವುದರಿಂದ ದಸರಾ ವೇಳೆ ಚಾಮುಂಡಿಬೆಟ್ಟಕ್ಕೆ ಬಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಮಂದಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ, ವಿಜಯದಶಮಿಯಂದು (ಆ.2) ಬೆಟ್ಟಕ್ಕೆ 75 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಂಜನಗೂಡು ದೇವಾಲಯ: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆದ ದಸರಾ ಮಹೋತ್ಸವದ ವೇಳೆ ಪ್ರತಿದಿನ ಸರಾಸರಿ 20 ಸಾವಿರ ಮಂದಿಯಂತೆ 11 ದಿನದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಆರ್‌ಎಸ್‌ಗೆ 2.50 ಲಕ್ಷ ಪ್ರವಾಸಿಗರು: ಶ್ರೀರಂಗಪಟ್ಟಣ ತಾಲೂಕಿನ ಕೆಆ‌ರ್ ಎಸ್‌ಗೆ ದಸರಾ ವೇಳೆ ದಾಖಲೆಯ 2.50 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೆಆರ್ ಎಸ್‌ ನಲ್ಲಿ ಇದೇ ಮೊದಲ ಬಾರಿಗೆ ವಾರಣಾಸಿಯ ಗಂಗಾರತಿ ಮಾದರಿ ಸೆ.26ರಿಂದ 30ರವರೆಗೆ ಕಾವೇರಿ ಆರತಿ ವ್ಯವಸ್ಥೆ ಮಾಡಲಾಗಿತ್ತು. ವರ್ಣರಂಜಿತ ಕಾವೇರಿ ಆರತಿ ವೀಕ್ಷಣೆಗೆ ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು.

ಇದನ್ನೂ ಓದಿ:Fast Tag: ಫಾಸ್ಟ್ ಟ್ಯಾಗ್ ಇಲ್ಲದವರು ಇನ್ನು ದುಪ್ಪಟ್ಟು ಹಣ ಪಾವತಿಸಬೇಕಿಲ್ಲ – ನ.15ರಿಂದ ಈ ಹೊಸ ಟೋಲ್ ನಿಯಮ ಜಾರಿ

ಇದಲ್ಲದೆ, ನಿಮಿಷಾಂಬ, ರಂಗನತಿಟ್ಟು, ಟಿ.ನರಸೀಪುರದ ಗುಂಜಾನರಸಿಂಹಸ್ವಾಮಿ ದೇವಾಲಯ, ತಲಕಾಡು, ಸೋಮನಾಥಪುರ. ಮೇಲುಕೋಟೆ, ಕೆರೆತೊಣ್ಣೂರು, ನಾಗರಹೊಳೆ, ಬಂಡೀಪುರ, ಮಲೆ ಮಹದೇಶ್ವರಬೆಟ್ಟಿ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ವಿವಿಧೆಡೆ ಇರುವ ಪ್ರಮುಖ ಪ್ರವಾಸಿ ತಾಣ. ದೇವಾಲಯಗಳಿಗೆ ನವರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

Comments are closed.