Bagalakote : ಆಂಜನೇಯನ ಸನ್ನಿಧಿಯಲ್ಲಿ ‘ಭಂಡಾರ ಮಳೆ’ – ಪವಾಡವೆಂದ ಭಕ್ತರು, ವಿಜ್ಞಾನ ಹೇಳೋದೇನು?

Share the Article

 

Bagalakote : ಬಾಗಲಕೋಟೆಯಲ್ಲಿ ನಡೆದ ಘಟನೆಯೊಂದು ಇಡೀ ಜಿಲ್ಲೆಯ ಗಮನ ಸೆಳೆದಿದೆ. ಗ್ರಾಮದ ಆಂಜನೇಯ ದೇವಸ್ಥಾನದ ಸುತ್ತಮುತ್ತ ‘ಭಂಡಾರದ ಮಳೆ’ ಸುರಿದಿದ್ದು, ಗ್ರಾಮಸ್ಥರಲ್ಲಿ ಏಕಕಾಲಕ್ಕೆ ಅಚ್ಚರಿ, ಭಕ್ತಿ ಮತ್ತು ತುಸು ಆತಂಕವನ್ನೂ ಸೃಷ್ಟಿಸಿದೆ.

ಹೌದು, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ ಅಚ್ಚರಿ ವಿದ್ಯಮಾನಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಮಳೆಹನಿಗಳ ರೂಪದಲ್ಲಿ ದೇವಸ್ಥಾನದ ಆವರಣ ಸುತ್ತಲೂ ಭಂಡಾರ ಬಿದ್ದಿದೆ. ಇದನ್ನೇ ಗ್ರಾಮಸ್ಥರು ಭಂಡಾರದ ಮಳೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ವಿಷಯ ತಿಳಿದು ದೇವಾಲಯದತ್ತ ಆಗಮಿಸುತ್ತಿರೋ ಜನರು ಆವರಣದಲ್ಲಿ ಬಿದ್ದಿರೋ ಭಂಡಾರವನ್ನು ಹಣೆಗೆ ತಿಲಕವನ್ನಾಗಿ ಹಚ್ಚಿಕೊಳ್ಳುತ್ತಿದ್ದಾರೆ. ಕೆಲವರು ಈ ಭಂಡಾರವನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದಾರೆ.

 ಈ ಕುರಿತಾಗಿ ದೇವಾಲಯದ ಅರ್ಚಕರು ಮಾತನಾಡಿ ‘ಶುಕ್ರವಾರ ಸಂಜೆ ಮಳೆಯಾಗಿತ್ತು. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಹನಿಗಳ ರೂಪದಲ್ಲಿ ಭಂಡಾರ ಬಿದ್ದಿರುವುದನ್ನು ಗಮನಿಸಿ ನನಗೂ ಆಶ್ಚರ್ಯವಾಯಿತು. ಗ್ರಾಮದ ಹಿರಿಯರಿಗೆ ಮಾಹಿತಿ ನೀಡಿದ ನಂತರ, ಜನರೆಲ್ಲರೂ ದೇವಸ್ಥಾನದತ್ತ ಬಂದು ನೋಡುತ್ತಿದ್ದಾರೆ. ಇದು ದೈವದ ಶಕ್ತಿಯೇ ಇರಬೇಕು,’ ಎಂದು ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದರು. ಈ ಅಚ್ಚರಿಯ ಘಟನೆಯ ನಂತರ, ಹೆಗ್ಗೂರು ಆಂಜನೇಯ ದೇವಸ್ಥಾನವು ಸುತ್ತಮುತ್ತಲಿನ ಗ್ರಾಮಸ್ಥರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.

 ವಿಜ್ಞಾನ ಹೇಳೋದೇನು?

ವೈಜ್ಞಾನಿಕ ದೃಷ್ಟಿಕೋನದಲ್ಲಿ, ಕೆಲವೊಮ್ಮೆ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದ ಪರಾಗರೇಣುಗಳು ಅಥವಾ ನಿರ್ದಿಷ್ಟ ಬಗೆಯ ಶಿಲೀಂಧ್ರಗಳ ಬೀಜಕಣಗಳು (fungal spores) ಮೋಡಗಳಲ್ಲಿ ಸೇರಿಕೊಂಡಾಗ, ಮಳೆಯ ಹನಿಗಳು ಹಳದಿ ಬಣ್ಣಕ್ಕೆ ತಿರುಗಬಹುದು. ಮಳೆ ಬಂದು ನಿಂತ ನಂತರ, ನೀರು ಇಂಗಿಹೋದ ಮೇಲೆ ಈ ಕಣಗಳು ನೆಲದ ಮೇಲೆ ಹಳದಿ ಪುಡಿಯಂತೆ ಶೇಖರಣೆಯಾಗುವ ಸಾಧ್ಯತೆ ಇರುತ್ತದೆ. ಇದು ‘ಬಣ್ಣದ ಮಳೆ’ (Colored Rain) ಎಂಬ ವಿದ್ಯಮಾನಕ್ಕೆ ಕಾರಣವಾಗಬಹುದು.

Comments are closed.