Mysore Dasara: ಈ ಬಾರಿ ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ? ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರಾಸಕ್ತಿ

Mysore Dasara: ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

ದಸರಾ ಮಹೋತ್ಸವ ಉದ್ಘಾಟಿಸುವಂತೆ ಮುಖ್ಯಮಂತ್ರಿ ಪತ್ರ ಮುಖೇನ ಕೋರಿದ್ದಾರೆ. ಆದರೆ, ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸ್ವತಃ ಮುಖ್ಯಮಂತ್ರಿ ಅವರೇ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 22ರಿಂದ 11 ದಿನಗಳವರೆಗೆ ದಸರಾ ಮಹೋತ್ಸವ ಜರುಗಲಿದೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟಿಸಬೇಕೆಂದು ಕೋರಲಿದ್ದಾರೆ.
ನಗರದಲ್ಲಿ ನಡೆದ ದಸರಾ ಉನ್ನತಮಟ್ಟದ ಸಭೆಯಲ್ಲಿ ಈ ಬಾರಿ ಯಾರಿಂದ ಉದ್ಘಾಟನೆ ಮಾಡಿಸಬೇಕೆಂಬ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಭೆ ಮಾಮೂಲಿನಂತೆ ಮುಖ್ಯ ಮಂತ್ರಿ ಅವರ ವಿವೇಚನೆಗೆ ಬಿಟ್ಟಿತು. ಈ ಬಾರಿಯ ದಸರಾ ಉತ್ಸವವನ್ನು ಮಹಿಳೆಯೊಬ್ಬರಿಂದ, ಅದರಲ್ಲೂ ಸೋನಿಯಾ ಗಾಂಧಿ ಅವರಿಂದಲೇ ಮಾಡಿಸಬೇಕೆಂಬ ದೃಢ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ.
ವಿಧಾನಮಂಡಲದ ಮಳೆಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾಎಚ್.ಸಿ.ಮಹದೇವಪ್ಪ ಅವರೊಂದಿಗೆ ದೆಹಲಿಗೆ ತೆರಳಿ ಸೋನಿಯಾ ಅವರಿಗೆ ಆಹ್ವಾನ ನೀಡಲಿದ್ದಾರಂತೆ. ಇದಕ್ಕೆ ಜನರ ಮತ್ತು ವಿರೋಧ ಪಕ್ಷಗಳ ಅಭಿಪ್ರಾಯ ಏನು ಅನ್ನೋದನ್ನು ಕಾದು ನೋಡಬೇಕಷ್ಟೆ.
—————–
Comments are closed.