Dharmasthala Case: ಉತ್ಖನನ ಕಾರ್ಯಕ್ಕೆ ಕಾರ್ಮಿಕರ ನಿಯೋಜನೆ ಮಾಡಿದ ಗ್ರಾಮ ಪಂಚಾಯತ್‌: ಈ ರೀತಿ ಇರಲಿದೆ ಉತ್ಖನನ ಪ್ರಕ್ರಿಯೆ

Share the Article

Dharmasthala Case: ಧರ್ಮಸ್ಥಳದ ಸಮಾಧಿ ರಹಸ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸುಕುಧಾರಿ ವ್ಯಕ್ತಿ ಗುರುತು ಮಾಡಿದ 13 ಸ್ಥಳಗಳ ಶವಗಳ ಅವಶೇಷಗಳಿಗಾಗಿ ಎಸ್‌ಐಟಿ, ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಇಂದು (ಮಂಗಳವಾರ) ಮಹತ್ವದ ಉತ್ಖನನ ಕಾರ್ಯ ನಡೆಯಲಿದೆ.

ಎಸ್‌ಐಟಿ ಅಧಿಕಾರಿಗಳ ನಿರ್ದೇಶನದ ಮೇರೆಗೆ, ಸ್ಥಳೀಯ ಗ್ರಾಮ ಪಂಚಾಯಿತಿ ಉತ್ಖನನ ಕಾರ್ಯಕ್ಕೆ 12 ಕಾರ್ಮಿಕರನ್ನು ನಿಯೋಜನೆ ಮಾಡಲಾಗಿದೆ ಎಂದು ವರದಿಯಾಗಿದೆ. ಭಾರೀ ಮಳೆ ಇದ್ದರೂ ಶಸ್ತ್ರಸಜ್ಜಿತ ಎಎನ್‌ಎಫ್‌ ಸಿಬ್ಬಂದಿ ಸೋಮವಾರ ಬಿಗಿ ಭದ್ರತೆಯನ್ನು ಮುಸುಕುಧಾರಿ ಗುರುತು ಮಾಡಿದ ಸ್ಥಳಗಳಿಗೆ ನೀಡಿದ್ದಾರೆ.

ಪುತ್ತೂರು ಎ.ಸಿ.ಸ್ಟೆಲ್ಲಾ ವರ್ಗೀಸ್‌ ಅವರ ಸಮ್ಮುಖದಲ್ಲಿ ಉತ್ಖನನ ಕೆಲಸ ನಡೆಯಲಿದೆ. ನಿರ್ದಿಷ್ಟ ಸ್ಥಳಕ್ಕೂ ಹೊರಗಿನವರಿಗೂ ಕಾಣದಂತೆ ವ್ಯವಸ್ಥೆ ಮಾಡಲಾಗಿದೆ.

ಎಸ್‌ಐಟಿ ಅಧಿಕಾರಿಗಳು, ಎಫ್‌ಎಸ್‌ಎಲ್‌, ಸ್ಥಳ ಪರಿಶೀಲನಾ ಅಧಿಕಾರಿಗಳು (ಎಸ್‌ಓಸಿಓ), ಪಂಚರು, ಸಾಕ್ಷಿದಾರ (ಮುಸುಕುಧಾರಿ ವ್ಯಕ್ತಿ) ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಈ ಉತ್ಖನನ ಕೆಲಸ ನಡೆಯಲಿದೆ. ಆರು ಅಡಿಗಳಷ್ಟು ಆಳಕ್ಕೆ ಅಗೆಯಲು ನಿರ್ಧಾರ ಮಾಡಲಾಗಿದೆ. ಸಾಕ್ಷಿದಾರ ಸೂಚಿಸಿದರೆ ಮತ್ತಷ್ಟು ಆಳಕ್ಕೆ ಅಗೆಯಲಾಗುವುದು ಎನ್ನಲಾಗಿದೆ.

ಒಂದು ವೇಳೆ ಉತ್ಖನನ ಸಮಯದಲ್ಲಿ ಅಸ್ಥಿಪಂಜರ ಪತ್ತೆಯಾದರೆ, ವೈದ್ಯಾಧಿಕಾರಿಗಳು ಸ್ಥಳದಲ್ಲಿಯೇ ಪರಿಶೀಲನೆ ಮಾಡಲಿದ್ದಾರೆ. ನಂತರ ಹೆಚ್ಚಿನ ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುವುದು. ಒಂದು ವೇಳೆ ಅಸ್ಥಿಪಂಜರ ಅಥವಾ ಮೃತದೇಹದ ಭಾಗಗಳು ಪತ್ತೆಯಾಗದಿದ್ದರೆ ಆ ಸ್ಥಳವನ್ನು ದಾಖಲೆಗಾಗಿ ಗುರುತು ಮಾಡಲಾಗುವುದು ಎಂದು ವರದಿಯಾಗಿದೆ.

 

Comments are closed.