Bhannerughatta : ಜಪಾನ್ ಗೆ ಹಾರಲಿವೆ ಕರ್ನಾಟಕದ 4 ಆನೆಗಳು !!

Bhannerughatta: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ನಾಲ್ಕು ಆನೆಗಳು ಗುರುವಾರ (ಜುಲೈ 24) ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜಪಾನ್ಗೆ ಪ್ರಯಾಣ ಮಾಡಲಿವೆ.

ಹೌದು, ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿ ಒಂದು ಗಂಡು ಹಾಗೂ ಮೂರು ಹೆಣ್ಣಾನೆ ಜಪಾನ್ ಗೆ ತೆರಳಲಿವೆ. ಬೆಂಗಳೂರಿನಿಂದ ಜಪಾನ್ನ ಹಿಮೇಜಿ ಸೆಂಟ್ರಲ್ ಪಾರ್ಕ್ನ ಹಿಮೇಜಿ-ಸಫಾರಿ ಪಾರ್ಕ್ಗೆ ಆನೆಗಳು ಪ್ರಯಾಣ ಬೆಳೆಸಲಿವೆ. ಇದಕ್ಕೆ ಪ್ರತಿಯಾಗಿ ಜಪಾನ್ನಿಂದ ನಾಲ್ಕು ಚೀತಾ, ನಾಲ್ಕು ಪೂಮಾ , ಮೂರು ಚಿಂಪಾಂಜಿ, ಎಂಟು ಕ್ಯಾಪುಚಿನ್ ಕೋತಿಗಳು ಬನ್ನೇರುಘಟ್ಟಕ್ಕೆ ಬರಲಿವೆ.
ವಿಮಾನ ಏರುವ ಮುನ್ನ ಎಲ್ಲಾ ಆನೆಗಳಿಗೂ ಆಹಾರ ನೀಡಲಾಗುತ್ತದೆ. 8 ತಾಸು ವಿಮಾನ ಪ್ರಯಾಣದ ವೇಳೆ ಆನೆಗಳಿಗೆ ಸೌತೆಕಾಯಿ ಮತ್ತು ಬಾಳೆಹಣ್ಣು ನೀಡಲಾಗುತ್ತದೆ. ವಿಮಾನ ಇಳಿದ ನಂತರ ಸಹ ಆನೆಗಳಿಗೆ ದೈನಂದಿನ ಆಹಾರ ನೀಡಲಾಗುವುದು. ಆನೆಗಳ ಜೊತೆ ತೆರಳುವ ಬನ್ನೇರುಘಟ್ಟದ ಸಿಬ್ಬಂದಿ ಆರಂಭದಲ್ಲಿ ಎಲ್ಲಾ ರೀತಿಯ ಆರೈಕೆ ಮಾಡಲಿದ್ದಾರೆ. ಅವು ಅಲ್ಲಿಯ ಆಹಾರ, ಪರಿಸರಕ್ಕೆ ಹೊಂದಿಕೊಂಡ ನಂತರ ಹಿಂದಿರುಗಲಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಹಾಯಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.
ಆನೆಗಳ ಸುರಕ್ಷಿತ ಸಾಗಾಣಿಕೆಗಾಗಿ, ಹಿಮೇಜಿ ಸೆಂಟ್ರಲ್ ಪಾರ್ಕ್ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕರು ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಸೇರಿದಂತೆ ಒಟ್ಟು ಎಂಟು ಮಂದಿ ಪ್ರಾಣಿಗಳೊಂದಿಗೆ ಪ್ರಯಾಣಿಸಲಿದ್ದಾರೆ.
Comments are closed.