Mangalore: ಧರ್ಮಸ್ಥಳ ಸಮಾಧಿ ಪ್ರಕರಣ: ಸಹಾಯವಾಣಿ ಆರಂಭಕ್ಕೆ ಆಗ್ರಹ

Share the Article

Mangalore: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣದಲ್ಲಿ, ವಿಶೇಷ ತನಿಖಾ ದಳವನ್ನು ಸರಕಾರ ರಚನೆ ಮಾಡಿದ್ದು, ಇದರ ಜೊತೆಗೆ ಎಸ್‌ಐಟಿ ದೂರುಗಳನ್ನು ಆಲಿಸಲು ಸಹಾಯವಾಣಿಯನ್ನು ಸ್ಥಾಪಿಸುವಂತೆ ಅನನ್ಯ ಭಟ್‌ ಪರ ವಕೀಲರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಅನೇಕ ನೊಂದ ಕುಟುಂಬಗಳು ತಮ್ಮ ಕಷ್ಟದ ಬಗ್ಗೆ ವೈಯಕ್ತಿಕವಾಗಿ ನನಗೆ ಮಾಹಿತಿ ನೀಡಿದ್ದಾರೆ. ಸರ್ಕಾರ ಸಹಾಯವಾಣಿಯನ್ನು ಸ್ಥಾಪಿಸಿದರೆ, ಅದು ಅವರಿಗೆ ಹೆಚ್ಚಿನ ಸಹಾಯ ಮಾಡುತ್ತದೆ” ಎಂದು ನಾಪತ್ತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್‌ ಅವರ ವಕೀಲರು ಹೇಳಿದ್ದು, ಈ ಕುರಿತು ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.

ಎಸ್‌ಐಟಿ ರಚನೆ ಆದ ನಂತರ ಸಾಕಷ್ಟು ಮಂದಿ ನನಗೆ ಕರೆ ಮಾಡಿ, ತಮಗಾದ ಭಯಾನಕ ಅನುಭವ ಮತ್ತು ದುರಂತಗಳನ್ನು ತಿಳಿಸುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಕುಟುಂಬಗಳು ಭಯವಿಲ್ಲದೆ ಮುಂದೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಹಾಯವಾಣಿ ಸುಲಭವಾಗುತ್ತದೆ ಎಂದು ವಕೀಲ ಮಂಜುನಾಥ್ ಹೇಳಿದರು.

1998 ಮತ್ತು 2014 ರ ನಡುವೆ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಶವಗಳನ್ನು ಹೂಳಲು ಮತ್ತು ದಹನ ಮಾಡಲು ಒತ್ತಾಯಿಸಲಾಗಿದೆ ಎಂದು ಮಾಜಿ ನೈರ್ಮಲ್ಯ ಕಾರ್ಮಿಕರೊಬ್ಬರು ಮುಂದೆ ಬಂದು ಹೇಳಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ 2003 ರಲ್ಲಿ ಧರ್ಮಸ್ಥಳಕ್ಕೆ ಕಾಲೇಜು ಪ್ರವಾಸದ ಸಮಯದಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇದೀಗ ಸಿಬಿಐನಲ್ಲಿ ಮಾಜಿ ಸ್ಟೆನೋಗ್ರಾಫರ್ ಆಗಿದ್ದ 60 ವರ್ಷದ ಅವರ ತಾಯಿ ಸುಜಾತಾ ಜುಲೈ 15 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Crime News: ತನ್ನದೇ ಕುಟುಂಬದ 8 ಮಂದಿಯನ್ನು ಹ*ತ್ಯೆ ಮಾಡಲು ಗೋಧಿ ಹಿಟ್ಟಿಗೆ ವಿಷ ಬೆರೆಸಿದ ಮಹಿಳೆ

Comments are closed.