Kamal Haasan: ಕನ್ನಡಿಗರಿಗೆ ಹೆದರಿ ಹೈಕೋರ್ಟ್ ಮೊರೆ ಹೋದ ಕಮಲ್ ಹಾಸನ್ – ಕೋರ್ಟ್ನಲ್ಲಿ ಇಟ್ಟ ಕೋರಿಕೆಯೇನು?

Kamal Haasan: ಸಿನಿಮಾ ಪ್ರಮೋಷನ್ಗಾಗಿ ಬೆಂಗಳೂರಿಗೆ ಬಂದಿದಾಗ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆನ್ನಲ್ಲೇ ಕರ್ನಾಟಕದಾದ್ಯಂತ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಕಮಲ್ ಹಾಸನ್ ಮಾತ್ರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಈ ಬೆನ್ನಲ್ಲೇ ಮತ್ತೆ ರಾಜ್ಯಾದ್ಯಂತ ಕಮಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಕರ್ನಾಟಕದಲ್ಲಿ ಅವರ ‘ಥಗ್ ಲೈಫ್’ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಒಂದು ವೇಳೆ ಚಿತ್ರ ರಿಲೀಸ್ ಮಾಡಿದರೆ ಇಡೀ ಚಿತ್ರಮಂದಿರವನ್ನು ಸುಟ್ಟು ಹಾಕುವುದಾಗಿ ಹಾಗೂ ಬೆಂಗಳೂರನ್ನು ಬಂದ್ ಮಾಡುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ನೀವು ಏನೇ ತಿಪ್ಪರಲಾಗ ಹಾಕಿದರೂ ಕೂಡ ನಾನು ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರುತ್ತಿರುವ ಕಮಲ್ ಹಾಸನ್ ಇದೀಗ ದಿಕ್ಕು ತೋಚದೆ, ತಮ್ಮ ಚಿತ್ರದ ಪರವಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ‘ಥಗ್ ಲೈಫ್’ ( Thug Life) ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಚಲನಚಿತ್ರ ಮಂಡಳಿ ಎಚ್ಚರಿಸಿದ ನಂತರ, ನಟ ಇದೀಗ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಬರೋಬ್ಬರಿ 300 ಕೋಟಿ ಬಜೆಟ್ನಲ್ಲಿ ಸೆಟ್ಟೇರಿರುವ ಈ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅನುಮತಿ ಸಿಕ್ಕಿಲ್ಲ. ಇದೀಗ ನಟ ಕಾನೂನಿನ ಮೊರೆ ಹೋಗಿದ್ದಾರೆ.
ಇನ್ನು ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ತಮ್ಮ ಮುಂಬರುವ ಚಿತ್ರ ‘ಥಗ್ ಲೈಫ್’ ಬಿಡುಗಡೆಗೆ ತಡೆ ನೀಡಿದ್ದು, ಮುಂದಿನ ಒಂದು ದಿನದೊಳಗೆ ಕ್ಷಮೆ ಕೇಳುವಂತೆ ಡೆಡ್ಲೈನ್ ನೀಡಿದೆ. ಇದರ ನಡುವೆ ನಟ ಕಮಲ್ ಹಾಸನ್ ಸೋಮವಾರ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತಮ್ಮ ಕಂಪನಿಯ ರಾಜ್ಕಮಲ್ ಫಿಲ್ಮ್ ಇಂಟರ್ನ್ಯಾಷನಲ್ ಸಿಇಒ ಮೂಲಕ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯು ತಮ್ಮ ಸಿನಿಮಾ ಪ್ರದರ್ಶನವನ್ನು ನಿಲ್ಲಿಸದಂತೆ ತಡೆಯುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ. ಚಲನಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆಯೂ ಅವರು ಕಮಲ್ ಕೋರಿದ್ದಾರೆ.
Comments are closed.