Rajasthan: ಕೋಮು ಸಂಘರ್ಷಕ್ಕೆ ಕಾರಣವಾದ ‘ನಿಂಬೆಹಣ್ಣು’ – ಹೇಗೆ?

Share the Article

Rajasthan : ನಿಂಬೆಹಣ್ಣು ವ್ಯಾಪಾರದ ವೇಳೆ ಆರಂಭವಾದ ಜಗಳ ಒಂದು ಕೋಮು ಸಂಘರ್ಷಕ್ಕೆ ಕಾರಣವಾಗಿ, ಅತಿರೇಕದ ಹಂತ ತಲುಪಿ ಓರ್ವನು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಹೌದು, ರಾಜಸ್ಥಾನದ ಉದಯಪುರದಲ್ಲಿ ಗುರುವಾರ ತಡರಾತ್ರಿ ಉದಯಪುರದ ಧನ್ಮಂಡಿ ಪ್ರದೇಶದಲ್ಲಿರುವ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ತರಕಾರಿ ಖರೀದಿಸಲು ಬಂದಿದ್ದಾನೆ. ಈ ವೇಳೆ ನಿಂಬೆಹಣ್ಣು ಖರೀದಿಸುವ ವಿಚಾರದಲ್ಲಿ ಅಂಗಡಿ ಮಾಲೀಕ ಹಾಗೂ ತರಕಾರಿ ಖರೀದಿಸಲು ಬಂದ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲವೇ ಕ್ಷಣದಲ್ಲಿ ಈ ಜಗಳ ವಿಕೋಪಕ್ಕೆ ಹೋಗಿದ್ದು, ಕೋಮು ಸಂಘರ್ಷವಾಗಿ ಬದಲಾಗಿದೆ.

ಈ ವೇಳೆ ಐದರಿಂದ ಏಳು ಜನರ ಗುಂಪು ಹರಿತವಾದ ಆಯುಧದಿಂದ ತರಕಾರಿ ಮಾರಾಟಗಾರ ಸತ್ವೀರ್ (50) ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಸತ್ವೀರ್ ಮುಖಕ್ಕೆ ಗಂಭೀರ ಗಾಯವಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಗಲಾಟೆಯ ವೇಳೆ ಮಾರುಕಟ್ಟೆಯಲ್ಲಿರುವ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಇನ್ನು ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ಅಂಗಡಿಗಳ ಬೆಂಕಿ ಆರಿಸಿದ್ದಾರೆ. ಎಸ್‌ಪಿ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಬಂದ ನಾಲ್ಕು ಠಾಣೆಗಳ ಪೊಲೀಸ್ ತಂಡಗಳು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

Comments are closed.