TB Dam: ತುಂಗಾಭದ್ರಾ ಡ್ಯಾಂ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ, ನಿಟ್ಟುಸಿರು ಬಿಟ್ಟ ರೈತರು

Share the Article

TB Dam: ತುಂಗಭದ್ರಾ ಜಲಾಶಯದಲ್ಲಿ (TB Dam) ಮುರಿದಿದ್ದ 19ನೇ ಗೇಟ್‍ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ (Stop Log Gate) ಅಳವಡಿಕೆ ಯಶಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದ್ದು ತುಂಗಭದ್ರೆಯನ್ನ ಅವಲಂಭಿಸಿರೋ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಸ್ತುತ ಸ್ಟಾಪ್ ಗೇಟ್ ಗಳನ್ನು ಅಳವಡಿಸಲಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹೊರಗೆ ಹೋಗುವುದು ನಿಂತಿದೆ. ಅಣೆಕಟ್ಟಿಗೆ ಸುಮಾರು 65 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಭಾರೀ ಪ್ರಮಾಣದ ನೀರಿನ ಹೊರಹರಿವಿದ್ದರೂ ಗೇಟ್ ಅಳವಡಿಕೆಯಂತಹ ಕಷ್ಟಸಾಧ್ಯವಾದ ಕಾರ್ಯವನ್ನು ತಜ್ಞ ಎಂಜಿನಿಯರ್‌ ಕನ್ನಯ್ಯ ನಾಯ್ಡು ಮತ್ತವರ ತಂಡ ಸಾಧಿಸಿದ್ದು, ರೈತರನ್ನು ಆತಂಕದಿಂದ ಮುಕ್ತಗೊಳಿಸಿದ್ದಾರೆ. ತುಂಗಭದ್ರಾ ಜಲಾಶಯದ ನೀರನ್ನು ಆಧರಿಸಿ ಎರಡು ಬೆಳೆ ಬೆಳೆಯುವ ರೈತರು ಇನ್ನು ನಿಶ್ಚಿಂತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ಈ ಮಹಾನ್ ಸಾಧನೆ ಮಾಡಿದ ಕನ್ನಯ್ಯ ನಾಯ್ಡು ಅವರ ಈ ಕಾರ್ಯಕ್ಕೆ ಕೋಟ್ಯಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಯ್ಯ ನಾಯ್ಡು ಏನು ಹೇಳುತ್ತಾರೆ?
ಕ್ರೆಸ್ಟ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರು ಮಾಧ್ಯಮಗಳಿಗೆ ಮಾತನಾಡಿ, ಈ ಅಣೆಕಟ್ಟಿನ ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ತಕ್ಷಣವೇ ಬದಲಾಯಿಸಿದರೆ ಇನ್ನೂ 30 ವರ್ಷಗಳವರೆಗೆ ಕಾರ್ಯನಿರ್ವಹಿಸಬಹುದು. ಅಣೆಕಟ್ಟು ನಿರ್ಮಾಣವಾಗಿ 45 ವರ್ಷಗಳ ನಂತರ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಬೇಕಾಗಿತ್ತು. ಕಲ್ಲಿನ ಚಪ್ಪಡಿಗಳು ಸಡಿಲಗೊಂಡು ಅಣೆಕಟ್ಟು ಅದರ ಸಾಮರ್ಥ್ಯ ಕುಸಿದಾಗ ಅವಘಡ ಸಂಭವಿಸಬಹುದು. ಆದ್ದರಿಂದ 30 ವರ್ಷಗಳ ನಂತರ ಹೊಸ ಅಣೆಕಟ್ಟು ನಿರ್ಮಿಸಬೇಕು ಎಂದು ಹೇಳಿದರು.

Leave A Reply