Nikhil kumaraswamy Crying: ಗೌಡರ ವಂಶವಾಹಿಯಲ್ಲೇಕೆ ಹೀಗೆ ಕಣ್ಣೀರು ? ನಿಜಕ್ಕೂ ನಿಖಿಲ್ ಅತ್ತದ್ದು ಯಾಕೆ ಗೊತ್ತಾ ?!

Nikhil Kumaraswamy Crying: ವಿಧಾನಸಭಾ ಚುನಾವಣಾ ಕಾವು ಎಲ್ಲೆಡೆ ರಂಗೇರಿದ್ದು, ರಾಜಕೀಯ ಪಕ್ಷಗಳು ಜನರ ಮನವೊಲಿಸುವ ಪ್ರಯತ್ನಕ್ಕೆ ಲಗ್ಗೆ ಇಟ್ಟು ಮತಬೇಟೆಗೆ ನಾನಾ ತಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಹೇಗಾದರೂ ಸರಿ ಈ ಬಾರಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲೇಬೇಕು ಎಂದು ಜೆಡಿಎಸ್‌ (JDS) ಪಕ್ಷ ರಣ ತಂತ್ರ ರೂಪಿಸುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ಜೆಡಿಎಸ್‌, ಮೊದಲ ಪಟ್ಟಿಯಲ್ಲಿ 93 ಅಭ್ಯರ್ಥಿಗಳನ್ನೂ ಘೋಷಣೆ ಮಾಡಿದ್ದು, 49 ಅಭ್ಯರ್ಥಿಗಳನ್ನು ಎರಡನೇ ಪಟ್ಟಿಯಲ್ಲಿ ಅಧಿಕೃತವಾಗಿ ಘೋಷಿಸಿದೆ. ಈ ನಡುವೆ ಎಚ್‌ಡಿ ದೇವೇಗೌಡರಿಂದ(H. D. Deve Gowda) ಬಿ ಫಾರಂ ಸ್ವೀಕರಿಸುವ ಸಂದರ್ಭ ನಿಖಿಲ್‌ ಕುಮಾರಸ್ವಾಮಿ ಗಳಗಳನೆ ಅತ್ತ (Nikhil Kumaraswamy Crying) ಘಟನೆ ನಡೆದಿದೆ.

ಅಳೋದು ದೊಡ್ಡೇಗೌಡ ದೇವೇಗೌಡರ ಕುಟುಂಬಕ್ಕೆ ಹೊಸದಲ್ಲ. ಅದು ದೇವೇಗೌಡರ ಮನೆಯಲ್ಲಿ ಅನುವಂಶಿಕವಾಗಿ ರಕ್ತದಲ್ಲಿ ಕಣ್ಣೀರು ಹರಿದು ಬಂದ ಕಥೆಯೋ ಏನೋ ಎಂಬಂತೆ ದೇವೇಗೌಡರ ವಂಶಸ್ಥರಲ್ಲಿ ಕಣ್ಣೀರು ಸರಾಗವಾಗಿ ಹರಿಯುತ್ತದೆ. ಅದು ಕೂಡ ಚುನಾವಣಾ ಸಂದರ್ಭದಲ್ಲಿ ಗೌಡರ ಕುಟುಂಬದಲ್ಲಿ ಕಣ್ಣೀರಿಗೆ ಕೊರತೆ ಎಂಬುದೇ ಇಲ್ಲ. ಎಚ್ ಡಿ ದೇವೇಗೌಡರು ಚುನಾವಣಾ ಸಂದರ್ಭದಲ್ಲಿ ಕಣ್ಣೀರ ಕಾರ್ಡ್ ಪ್ಲೇ ಮಾಡಿ ಭಾವನಾತ್ಮಕವಾಗಿ ಮತದಾರರ ಅನುಕಂಪ ಗಿಟ್ಟಿಸಲು ಪ್ರಯತ್ನಿಸಿದ್ದು ಕರ್ನಾಟಕ ಹಲವು ಬಾರಿ ಕಂಡಿದೆ. ದೇವೇಗೌಡರ ನಂತರ ಅವರ ಸುಪುತ್ರ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಕಣ್ಣೀರ ಕಲೆಯಲ್ಲಿ ಪಾರಂಗತ. ಅಗತ್ಯ ಬಿದ್ದಾಗ ಕೋಡಿ ಹರಿಸುವುದರಲ್ಲಿ ಆತ ಸಿದ್ದಹಸ್ತ. ಇದೀಗ ಈ ಕಲೆ ಮುಂದಿನ ಜನರೇಷನಿಗೆ ಪಾಸ್ ಆಗಿದೆ. ಎಚ್ ಡಿ ಕುಮಾರಸ್ವಾಮಿ ಅವರ ಮೊದಲ ಹೆಂಡತಿಯ ಮೊದಲ ಮಗ ಕಣ್ಣೀರ ಟ್ರಯಲ್ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕಾಗೇ ದೇವೇಗೌಡರ ಮುಂದೆ ಅತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಲಘುವಾಗಿ ಚರ್ಚೆ ನಡೆಯುತ್ತಿದೆ. ನಿಜ ವಿಷ್ಯ ಬೇರೇನೇ ಉಂಟಂತೆ. ಅದನ್ನು ನಾವು ನಿಮಗೆ ಹೇಳ್ತೇವೆ.

ಈ ನಡುವೆ ಜೆಡಿಎಸ್‌ನಿಂದ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡುವ ಮೊದಲು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರಿಂದ ಬಿ ಫಾರಂ ಸ್ವೀಕರಿಸುವಾಗ ನಿಖಿಲ್‌ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರ ಧಾರೆ ಹರಿಸಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಎರಡು ಕ್ಷೇತ್ರಗಳ ಪೈಕಿ ಚನ್ನಪಟ್ಟಣವನ್ನು ಉಳಿಸಿಕೊಂಡು ರಾಮನಗರಕ್ಕೆ ರಾಜೀನಾಮೆ ಕೂಡ ನೀಡಿದ್ದರು. ಅಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪ‌ರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಗೆಲುವಿನ ಜಯಭೇರಿ ಬಾರಿಸಿದ್ದರು. ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಅನಿತಾ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಅವಕಾಶ ಕಲ್ಪಿಸಿದ್ದು, ಈ ಬಾರಿಯ ಚುನಾವಣೆ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಎಚ್‌ಡಿ ದೇವೇಗೌಡರಿಂದ ಬಿ ಫಾರಂ ಸ್ವೀಕರಿಸುವ ಸಂದರ್ಭ ನಿಖಿಲ್‌ ಕುಮಾರಸ್ವಾಮಿ ಗಳಗಳನೆ ಅತ್ತ ಘಟನೆ ನಡೆದಿದೆ. ಅರೆ ಇದೇನಪ್ಪಾ, ವಂಶ ಪಾರಂಪರ್ಯವಾಗಿ ಹರಿದು ಬರುತ್ತಿರುವ ಕಣ್ಣೀರಿನ ಹಿಂದಿನ ಮರ್ಮವೇನು ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ಪ್ರತಿ ಬಾರಿ ಎಲೆಕ್ಷನ್ ಸಮಯದಲ್ಲಿ ಕಣ್ಣೀರ ಹೈ ಡ್ರಾಮಾ ರಿಹರ್ಸಲ್ ಏನಾದರೂ ನಡೆಯುತ್ತಾ? ಕಣ್ಣೀರಧಾರೆ ಹರಿಸಿ ಜನ ಮನದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನವಾ ಗೊತ್ತಿಲ್ಲ!

ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿಖಿಲ್ ಕುಮಾರಸ್ವಾಮಿ ಪದ್ಮನಾಗರದ ಎಚ್‌ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ತನ್ನ ಅಜ್ಜ ದೇವೇಗೌಡರ ಆರೋಗ್ಯ ಸ್ಥಿತಿ ಕಂಡು ದುಃಖಿತರಾಗಿ ಕಣ್ಣಿರು ಸುರಿಸಿದ್ದು ಎಂಬುದು ಸದ್ಯ ಕಣ್ಣೀರಿಗೆ ಕೇಳಿ ಬರುತ್ತಿರುವ ಕಾರಣ. ನಿಖಿಲ್‌ ಪತ್ನಿ ರೇವತಿ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಕೂಡ ಈ ಸಂದರ್ಭ ಉಪಸ್ಥಿತರಿದ್ದರು.

Leave A Reply

Your email address will not be published.