Home Interesting ಅದಮ್ಯ ಆತ್ಮವಿಶ್ವಾಸದ ಗಣಿ ಈ ಬಾಲಕಿ !! | ಒಂಟಿ ಕಾಲಿನಲ್ಲಿ ಶಾಲೆಗೆ ತೆರಳಿ ಶಿಕ್ಷಕಿಯಾಗಬೇಕೆಂಬ...

ಅದಮ್ಯ ಆತ್ಮವಿಶ್ವಾಸದ ಗಣಿ ಈ ಬಾಲಕಿ !! | ಒಂಟಿ ಕಾಲಿನಲ್ಲಿ ಶಾಲೆಗೆ ತೆರಳಿ ಶಿಕ್ಷಕಿಯಾಗಬೇಕೆಂಬ ಕನಸು ಹೊತ್ತಿರುವ ಸೀಮಾಳ ಬದುಕೇ ಒಂದು ಸ್ಫೂರ್ತಿ

Hindu neighbor gifts plot of land

Hindu neighbour gifts land to Muslim journalist

ಆತ್ಮವಿಶ್ವಾಸ ಒಂದಿದ್ದರೆ ಸಾಧಿಸಲು ಅಸಾಧ್ಯ ಎಂಬುದು ಯಾವುದೂ ಇಲ್ಲ. ಅಂತೆಯೇ ಇಲ್ಲೊಬ್ಬಳು ಬಾಲಕಿ ಅದಮ್ಯ ಆತ್ಮವಿಶ್ವಾಸದ ಗಣಿಯಾಗಿ ರಾರಾಜಿಸುತ್ತಿದ್ದಾಳೆ. ಬಿಹಾರದ ನಕ್ಸಲ್ ಪೀಡಿತ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿನಿ ಸೀಮಾ ಕುಮಾರಿ ಸಾಮಾನ್ಯ ಬಾಲಕಿಯಲ್ಲ, ಇತರ ಅನೇಕ ವಿಕಲಚೇತನ ಮಕ್ಕಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾಳೆ. ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲೊಂದನ್ನು ಕಳೆದುಕೊಂಡಿರುವ ಸೀಮಾ, ತನ್ನ ಅದೃಷ್ಟವನ್ನು ಶಪಿಸುವ ಬದಲು ಶಿಕ್ಷಕಿಯಾಗುವ ಕನಸನ್ನು ನನಸು ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ.

ಬಿಹಾರದ ಜಮುಯಿ ಜಿಲ್ಲೆಯ ಖೈರಾ ಬ್ಲಾಕ್‌ನ ಫತೇಪುರ್ ಗ್ರಾಮದ ಮೂಲದ ಸೀಮಾ, ಒಂದೇ ಕಾಲಿನಲ್ಲೇ ಒಂದು ಕಿಲೋ ಮೀಟರ್ ದೂರದ ಶಾಲೆಗೆ ನಡೆದೇ ಹೋಗುತ್ತಾಳೆ. ಆಕೆಯ ಅದಮ್ಯ ಆತ್ಮವಿಶ್ವಾಸ ಕಂಡು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ‘ನಾನು ಶಿಕ್ಷಕಿಯಾಗಲು ಬಯಸುತ್ತೇನೆ. ನಾನು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಶಿಕ್ಷಣ ನೀಡಲು ಬಯಸುತ್ತೇನೆ’ ಎನ್ನುವುದರೊಂದಿಗೆ ಸೀಮಾ ಕಣ್ಣಿನಲ್ಲಿ ಮಿಂಚು ಹರಿಸುತ್ತಾಳೆ.

ಆಕೆಯ ತಂದೆ ಖಿರಣ್ ಮಾಂಝಿ ವಲಸೆ ಕಾರ್ಮಿಕರಾಗಿದ್ದಾರೆ. ಅವರು ಪ್ರತಿ ತಿಂಗಳು ಕಳುಹಿಸುವ ಸಣ್ಣ ಮೊತ್ತದಿಂದ ಅವರ ಕುಟುಂಬವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆರು ಒಡಹುಟ್ಟಿದವರಲ್ಲಿ ಈಕೆ ಎರಡನೆಯವಳು ಎಂದು ಆಕೆಯ ತಾಯಿ ಬೇಬಿ ದೇವಿ ಹೇಳುತ್ತಾರೆ. ಸೀಮಾ ರಸ್ತೆ ಅಪಘಾತದಲ್ಲಿ ತನ್ನ ಕಾಲು ಕಳೆದುಕೊಂಡಿದ್ದಕ್ಕಾಗಿ ಪಶ್ಚಾತ್ತಾಪ ಪಡುವುದನ್ನು ನಾನು ಎಂದಿಗೂ ನೋಡಲಿಲ್ಲ. ಬದಲಿಗೆ ಅವಳು ಯಾವಾಗಲೂ ಸ್ಫೂರ್ತಿಯ ಸೆಳೆಯಾಗಿದ್ದಾಳೆ ಎಂದು ಸೀಮಾ ಅವರ ಶಿಕ್ಷಕ ಶಿವಕುಮಾರ್ ಭಗತ್ ಹೇಳಿದ್ದಾರೆ.

ಸೀಮಾಳ ಅಧ್ಯಯನವನ್ನು ಮುಂದುವರಿಸುವ ಸಂಕಲ್ಪದಿಂದ ಹರ್ಷಗೊಂಡ ಗ್ರಾಮಸ್ಥರು ತಮ್ಮ ಬೆಂಬಲವನ್ನು ನೀಡಲು ನಿರ್ಧರಿಸಿದ್ದಾರೆ. ಅವಳು ಈಗ ತನ್ನ ವಯಸ್ಸಿನ ಅನೇಕ ಹುಡುಗಿಯರಿಗೆ ಮಾದರಿಯಾಗಿದ್ದಾಳೆ. ನಾವು ಎಲ್ಲಾ ಹಂತಗಳಲ್ಲಿ ಕುಟುಂಬದೊಂದಿಗೆ ಸಹಕರಿಸುತ್ತೇವೆ ಎಂದು ಸ್ಥಳೀಯ ನಿವಾಸಿಯೋರ್ವರು ಹೇಳಿದ್ದಾರೆ.

ಸೀಮಾ ಕುಮಾರಿ ಅವರ ಬಗ್ಗೆ ನೆಟಿಜನ್ ಗಳು, ರಾಜಕಾರಣಿಗಳು ಹಾಗೂ ಸೆಲಬ್ರೆಟಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಸೋನು ಸೂದ್ ವೀಡಿಯೊ ನೋಡಿ ಸೀಮಾಗೆ ನೆರವು ನೀಡಲು ನಿರ್ಧರಿಸಿದ್ದಾರೆ. ಹಿಂದಿಯಲ್ಲಿ ಟ್ವಿಟ್ ಮಾಡಿರುವ ಅವರು, ಸೀಮಾ ಶೀಘ್ರದಲ್ಲಿ ಎರಡೂ ಕಾಲುಗಳಲ್ಲಿ ಶಾಲೆಗೆ ತೆರಳಲಿದ್ದಾಳೆ ಎಂದು ಹೇಳಿದ್ದಾರೆ. ಕೃತಕ ಕಾಲುಗಳನ್ನು ಅಳವಡಿಸಲು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಕಾಲಿಲ್ಲದಿದ್ದರೇನಂತೆ ಆಕೆಗೆ ಓದಿ ಶಿಕ್ಷಕಿಯಾಗಬೇಕೆಂಬ ಛಲವಿದೆ. ಅದೊಂದು ಸಾಕಲ್ಲವೇ ಆಕೆಯ ಕನಸು ನನಸಾಗಲು. ಅದೆಷ್ಟೋ ವಿಕಲಚೇತನ ಮಕ್ಕಳಿಗೆ ಸ್ಫೂರ್ತಿಯಾಗುವ ಈಕೆಯ ಈ ಸವಾಲಿನ ಬದುಕಿಗೆ ನಮ್ಮದೊಂದು ಸಲಾಂ.