ಮಂಗಳೂರು : ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ| ಬಜ್ಪೆ ಠಾಣೆಯ ಇನ್ಸ್ ಪೆಕ್ಟರ್ ಸಹಿತ ಮೂವರ ಅಮಾನತು!

Share the Article

ಬಜ್ಪೆ: ಹಿಂದೂ ಸಂಘಟನೆಯ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಬಜ್ಪೆ ಠಾಣೆಯ ಇನ್ಸ್‌ಪೆಕ್ಟರ್ ಸಹಿತ ಮೂವರು ಪೊಲೀಸರನ್ನು ರಂದು ಅಮಾನತುಗೊಳಿಸಲಾಗಿದೆ.

ಹಿಂದೂ ಸಂಘಟನೆಗೆ ಸೇರಿದ ಕಾರ್ಯಕರ್ತರ
ಮೇಲೆ ಬಜ್ಪೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ರವಿವಾರ ಬಜ್ಜೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಇನ್ ಸ್ಪೆಕ್ಟರ್ ಸಹಿತ ಐವರು ಪೊಲೀಸರನ್ನು ಅಮಾನತು ಮಾಡಬೇಕೆಂದು ಆಗ್ರಹ ಮಾಡಿದ್ದರು.

ಈಗ ಪ್ರತಿಭಟನೆ ನಡೆದ 24 ಗಂಟೆಯೊಳಗಡೆ ಮೂವರನ್ನು ಅಮಾನತುಗೊಳಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮೀಷನರ್‌, ಬಜ್ಪೆ ಠಾಣೆಯಲ್ಲಿ ಪೊಲೀಸರು ವಿಚಾರಣೆ ನೆಪದಲ್ಲಿ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆಂದು ಮೂವರು ಯುವಕರು ದೂರು ನೀಡಿದ್ದರು, ಅಲ್ಲದೇ ಅವರು ಮಂಗಳೂರಿನ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದರು.

ಈ ದೂರಿನನ್ವಯ ಇಲಾಖೆ ತನಿಖೆ ನಡೆಸಿದಾಗ, ಆ ಮೂವರು ಯುವಕರ ಮೈ ಮೇಲೆ ಗಾಯದ ಗುರುತುಗಳು ಹಾಗೂ ರಕ್ತ ಹೆಪ್ಪುಗಟ್ಟಿರುವ ಗುರುತುಗಳು ಪತ್ತೆಯಾಗಿದೆ. ತನಿಖೆ ವೇಳೆ ಬಜ್ಪೆ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಸಿಬಂದಿಗಳಿಂದ ಕರ್ತವ್ಯ ಲೋಪ ಆಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಸಹಿತ ಮೂವರನ್ನು ಅಮಾನತಿನಲ್ಲಿರಿಸಲಾಗಿದೆ ಎಂದರು.

ಪ್ರಕರಣದ ಹಿನ್ನೆಲೆ : ಪೊಲೀಸರ ಮೇಲೆ ದೂರು ನೀಡಿದ ಯುವಕರ ಪ್ರಕಾರ ” ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಬಾಗ ಅಕ್ರಮ ತಳ್ಳು ಅಂಗಡಿಗಳು
ಇರುವುದರ ಕುರಿತು ದೂರುಗಳು ಬಂದ ಕಾರದಿಂದ ಮಂಗಳೂರು ಸಹಾಯಕ ಕಮೀಷನರ್ ಮದನ್ ನೇತೃತ್ವದಲ್ಲಿ ತನಿಖೆ ನಡೆದು ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆದರೇ ಇಬ್ಬರು ಅಂಗಡಿಯವರು ಮತ್ತೆ ಅಲ್ಲಿಯೇ ವ್ಯವಹಾರ ನಡೆಸಿದ್ದು ಅದನ್ನು ಸ್ಥಳೀಯ ಇಬ್ಬರು ಯುವಕರು ಪ್ರಶ್ನಿಸಿದ್ದರು. ಅಲ್ಲದೇ, ಬೆಳಿಗ್ಗೆ ಹಾಗೂ ರಾತ್ರಿ ವೇಳೆ ತೆರವು ಅಂಗಡಿಯ ಮುಂಭಾಗ ಮೂಡಬಿದಿರೆ ನಿವಾಸಿ ವ್ಯಾಪಾರಿಯೊಬ್ಬರು ಎಳನೀರು ಅನ್ ಲೋಡ್ ಮಾಡುತ್ತಿದ್ದು ಇದಕ್ಕೆ ಕೂಡ ಈ ಇಬ್ಬರು ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಆ ಎಳನೀರು ವ್ಯಾಪಾರಿ ತನ್ನ ಎಳನೀರು ಇಳಿಸಲು ಅಡ್ಡಿಪಡಿಸಿದ ಯುವಕರ ವಿರುದ್ಧ ಬಜ್ಪೆ ಪೊಲೀಸ್ ಇನ್ಸ್ ಪೆಕ್ಟರ್ ಗೆ ಮೌಕಿಕವಾಗಿ ದೂರು ನೀಡಿದ್ದ ಎನ್ನಲಾಗಿದೆ.

ಈ ಪ್ರಕರಣದ ಕುರಿತು ವಿಚಾರಣೆ ಮಾಡಲು ಯುವಕರನ್ನು ಬಜಪೆ ಠಾಣೆಗೆ ಬರಲು ಹೇಳಿ, ಇನ್ಸ್‌ಪೆಕ್ಟರ್ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಯುವಕರು ತಮ್ಮದೂರಿನಲ್ಲಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ ರಾತ್ರಿ ವೇಳೆಯೂ ಈ ಯುವಕರನ್ನು ಠಾಣೆಯಲ್ಲಿ ಕೂರಿಸಿದ್ದು, ಆದರ ಬಗ್ಗೆ ಕೇಳಲು ಬಂದ ಇನ್ನೊಬ್ಬ ಯುವಕನ ಜತೆಯೂ ಅನುಚಿತವಾಗಿ ವರ್ತಿಸಿ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave A Reply