ಮಂಗಳೂರು: ಸಂಶಯದ ಪ್ರೇಯಸಿಯಿಂದ ನೊಂದ ಯುವಕ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನ!!ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ

Share the Article

ಮಂಗಳೂರು: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ತನ್ನ ಮೇಲೆ ಸಂಶಯಪಟ್ಟು, ಪೊಲೀಸ್ ಕಂಪ್ಲೇಟ್ ನೀಡಿದ್ದಾಳೆ ಎಂದು ತೀವ್ರವಾಗಿ ಮನನೊಂದ ಯುವಕನೋರ್ವ, ಟವರ್ ಏರಿ ಅಲ್ಲಿಂದ ಹಾರಿ ಸಾಯಲು ಪ್ರಯತ್ನ ಮಾಡಿದ ಘಟನೆಯೊಂದು ಅಡ್ಯಾರ್ ಬಳಿ ನಡೆದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಯ ಸತತ ಮನವೊಲಿಕೆಯಿಂದ ಯುವಕ ಕೆಳಗಿಳಿದಿದ್ದಾನೆ.

ಫರಂಗಿಪೇಟೆಯ ಕೊಡಾಣ್‌ನ ಸುಧೀರ್ (32) ಎಂಬಾತನೇ ಈ ಕೃತ್ಯ ಎಸಗಿದ ಯುವಕ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ನಂತರ ಇನ್ನೊಬ್ಬಳು ಯುವತಿಯ ಜೊತೆ ಪ್ರೇಮ ಪ್ರಸಂಗ ಶುರು ಮಾಡಿದ್ದಾನೆಂದು ಸಂಶಯ ಪಟ್ಟ ಯುವತಿ, ಖಿನ್ನತೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಳು.
ತನ್ನ ಅನಾರೋಗ್ಯಕ್ಕೆ ಪ್ರೀತಿಸುತ್ತಿದ್ದ ಹುಡುಗನೇ ಕಾರಣ ಎಂದು ಮನೆಯವರ ಬಳಿ ದೂರಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಮನೆಯವರು ಸುಧೀರ್ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದರಿಂದ ತನ್ನ ಊರಿನಲ್ಲಿ ಫ್ರೆಂಡ್ಸ್ ಮುಂದೆ ತನ್ನ ಮಾನ ಮರ್ಯಾದೆ ಹೋಯಿತು ಎಂದು ಮಾನಸಿಕವಾಗಿ ನೊಂದಿದ್ದಾನೆ. ಕೊನೆಗೆ ಸಾಯಬೇಕೆಂದು ನಿರ್ಧಾರ ಮಾಡಿ ಮೊಬೈಲ್ ಟವರ್ ಏರಿದ್ದಾನೆ. ಇಂದು ಬೆಳ್ಳಂ ಬೆಳಗ್ಗೆ ತನ್ನ ಬ್ಯಾಗ್ ಜೊತೆ ಒಂದು ಬಾಟ್ಲಿ ನೀರಿನ ಜೊತೆ ಅಡ್ಯಾರ್‌ನಲ್ಲಿರುವ ಟವರ್ ಮೇಲೇರಿದ ಈತ ತನ್ನ ಹುಡುಗಿಗೆ ತಾನು ಸಾಯ್ತನೆಂದು ಪೋನ್ ಮೂಲಕ ಮಾತಾಡುತ್ತಾ ಇದ್ದದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ ಪೊಲೀಸರು ಟವರ್ ಬಳಿ ಬಂದಿದ್ದಾರೆ. ನಂತರ ಆತನನ್ನು ಕೆಳಗಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆತನ ಪ್ರೇಯಸಿ ಕೂಡಾ ಬಂದಿದ್ದಳು. ಸದ್ಯ ಯುವಕನನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave A Reply