ರಾಮನಗರ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಒಬ್ಬರ ರಕ್ಷಣೆ

Share the Article

ಬೆಂಗಳೂರು : ರಾಮನಗರದ ಮಾಗಡಿ ತಾಲ್ಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರು ಮೃತಪಟ್ಟಿದ್ದಾರೆ.

ಗ್ರಾಮದ ನಿವಾಸಿಗಳಾದ ಸಿದ್ದಮ್ಮ (55), ಅವರ ಪುತ್ರಿ ಸುಮಿತ್ರಾ (30) ಹಾಗೂ ಅಳಿಯ ಹನುಮಂತ ರಾಜು (35) ಮೃತರು ಎಂದು ಗುರುತಿಸಲಾಗಿದೆ. ಸುಮಿತ್ರಾ ಅವರ ಹಿರಿಯ ಪುತ್ರಿ ಕೀರ್ತನಾಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಹನುಮಂತರಾಜು ದಮ್ಮನಕಟ್ಟೆಯಲ್ಲಿ ವ್ಯವಸಾಯ ಮಾಡಿಕೊಂಡು ಕುಟುಂಬ ಸಮೇತ ಅತ್ತೆಯ ಮನೆಯಲ್ಲೇ ನೆಲೆಸಿದ್ದು, ಮಂಗಳವಾರ ರಾತ್ರಿ ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಜಗಳ ತೆಗೆದಿದ್ದರು ಎನ್ನಲಾಗದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಕುಟುಂಬದವರು ಕೆರೆಗೆ ತೆರಳಿ ಆತ್ಮಹತ್ಯೆಗೆ ಮುಂದಾಗಿದ್ದರು.

ಸುಮಿತ್ರಾರ ಕಿರಿಯ ಪುತ್ರಿ ಚಂದನಾ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗುತ್ತಿದ್ದ ಕೀರ್ತನಾಳನ್ನು ರಕ್ಷಣೆ ಮಾಡಿದರು. ಉಳಿದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ಸ್ಥಳೀಯರು ಮಾಹಿತಿ ನೀಡಿದರು.

ಕುದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave A Reply