Puttur: ಪುತ್ತೂರು: ಮದುವೆ ಸಮಾರಂಭದ ಸಂದರ್ಭ ಬೀಗ ಹಾಕಿ ತೆರಳಿದ್ದ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳವು

Puttur: ಮನೆ ಮಗಳ ಮದುವೆ ನಿಶ್ಚಿತಾರ್ಥವಿದೆಯೆಂದು ಮನೆಗೆ ಬೀಗ ಹಾಕಿ ಹೋಗಿದ್ದ ಸಂದರ್ಭವನ್ನೇ ಬಳಸಿಕೊಂಡ ಕಳ್ಳರು, ಮನೆಯ ಅಟ್ಟದಲ್ಲಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸುಳಿಮೇಲು ನಿವಾಸಿ ಅಚ್ಯುತ ಗೌಡ (57) ಎಂಬವರು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ನಡುವೆ ಆಗಸ್ಟ್ 31 ರಂದು ಅಚ್ಯುತ ಗೌಡರ ಮಗಳ ನಿಶ್ಚಿತಾರ್ಥ, ನವೆಂಬರ್ 7 ರಂದು ಮದುವೆ ಹಾಗೂ ನವೆಂಬರ್ 8 ರಂದು ಮಗಳ ಗಂಡನ ಮನೆಯಲ್ಲಿ ಔತಣ ಕೂಟ ನಡೆದಿತ್ತು. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮನೆಯವರು ಮನೆಗೆ ಬೀಗ ಹಾಕಿ ತೆರಳಿದ್ದರು. ಎಲ್ಲಾ ಕಾರ್ಯಕ್ರಮ ಮುಗಿಸಿ ನವೆಂಬರ್ 12 ರಂದು ಅಡಿಕೆ ಸುಲಿಯಲೆಂದು ಅಟ್ಟದ ಮೇಲೆ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದಾಸ್ತಾನು ಇರಿಸಿದ್ದ 36 ಗೋಣಿ ಅಡಿಕೆಯಲ್ಲಿ 16 ಗೋಣಿ ಅಡಿಕೆ ಕಳವಾಗಿದೆ. ಕಳವಾದ ಅಡಿಕೆಯ ತೂಕ ಸುಮಾರು 288 ಕೆ.ಜಿ. ಆಗಿದ್ದು, ಇದರ ಮೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮನೆಯವರು ಇಲ್ಲದ ಸಮಯ ನೋಡಿಕೊಂಡೇ ಕಳ್ಳರು ಕೈಚಳಕ ತೋರಿಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಅಚ್ಯುತ ಗೌಡ ಅವರು ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.