Mangalore: ದೂರುದಾರ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ. ಮಾಜಿ ಅದ್ಯಕ್ಷ ಸ್ಫೋಟಕ ಮಾಹಿತಿ

Mangalore: ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಕೀಲ ಕೇಶವ ಗೌಡ ಅವರು ಮಾಸ್ಕ್ಮ್ಯಾನ್ ಕುರಿತು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿದೆ.

ಅನಾಮಿಕ ವ್ಯಕ್ತಿ ಈಗಾಗಲೇ ಯಾರು ಎಂದು ಧರ್ಮಸ್ಥಳದವರಿಗೆ ಗೊತ್ತಾಗಿದೆ. ಆತ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಛಾಟನೆ ಆಗಿದ್ದ ಎಂದು ಕೇಶವ ಗೌಡ ಅವರು ಹೇಳಿದ್ದಾರೆ.
ಈ ಕುರಿತು ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರು ಮೃತಪಟ್ಟರೆ ಅಂತ್ಯಸಂಸ್ಕಾರ ಮಾಡುವುದು ದೊಡ್ಡ ಸವಾಲಾಗುತ್ತಿತ್ತು. ಅನಾಮಿಕ ವ್ಯಕ್ತಿ ಹೆಣದ ಮೇಲೆ ಇದ್ದ ಚಿನ್ನ, ಹಣ ಕದಿಯುತ್ತಿದ್ದ. ಈ ಕಾರಣಕ್ಕೆ ಆತನನ್ನು 2014ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಬೆಳವಣಿಗೆ ಹಿಂದೆ ಇರುವ ಷಡ್ಯಂತ್ರ ಯಾರದ್ದು ಎಂದು ಗೊತ್ತಿದೆ. ಕ್ಷೇತ್ರದ ಮೇಲೆ ಆರೋಪ ಮಾಡುವವರಿಗೆ ದೇವರು ತಕ್ಕ ಬುದ್ಧಿ ಕೊಡಲಿ ಎಂದರು.
ಅನಾಮಿಕ ವ್ಯಕ್ತಿಯ ಹಿಂದೆ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಈ ವ್ಯಕ್ತಿಯನ್ನು ವಿಚಾರಣೆ ಮಾಡಬೇಕು, ಮಂಪರು ಪರೀಕ್ಷೆ ಮಾಡಬೇಕು. ಆತನ ಹಿನ್ನೆಲೆಯಲ್ಲಿರುವವರ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಅನಾಮಿಕ ಹೇಳಿದ ಹಾಗೆ ಕೊಲೆ, ಅತ್ಯಾಚಾರ, ಅನ್ಯಾಯ ಪ್ರಕರಣ ನಡೆದಿಲ್ಲ. ಉತ್ಖನನ ಸಂದರ್ಭ ಒಂದೆರಡು ಮೃತ ದೇಹ ಸಿಕ್ಕರೂ ಅಚ್ಚರಿಯಿಲ್ಲ. ಎಸ್ಐಟಿ (SIT) ಮೂಲಕ ಎಲ್ಲಾ ರೀತಿಯ ಸಮಗ್ರ ತನಿಖೆಯಾಗಲಿ ಎಂದು ಪಬ್ಲಿಕ್ ಟಿವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ರಾಜೀನಾಮೆ ಕೊಡಲು ಒತ್ತಾಯಿಸುತ್ತಾರೆ. ರಾಜೀನಾಮೆ ಕೊಡಲು ಮುಖ್ಯಮಂತ್ರಿ ಅಥವಾ ಶಾಸಕರಲ್ಲ, ಅವರು ಕ್ಷೇತ್ರದ ಧರ್ಮಾಧಿಕಾರಿಗಳು. ವಕೀಲರು ಹತ್ತಾರು ಹೆಣಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ, ಇಂತಹ ಬಣ್ಣದ ಕಾಗೆಗಳನ್ನು ಹಾರಿಸುತ್ತಾರೆ. ಎಲ್ಲರ ತನಿಖೆ ಆಗಬೇಕು, ಎಲ್ಲಾ ಸತ್ಯಗಳು ಹೊರಬರಬೇಕು ಎಂದು ಹೇಳಿದರು.
Comments are closed.