Kalaburagi: ಮುಸ್ಲಿಮರೆ ಇಲ್ಲದ ಊರಲ್ಲಿ ‘ದರ್ಗಾ’ ಕಟ್ಟಿದ ಹಿಂದೂಗಳು – ಹಿಂದೂ ಸ್ವಾಮೀಜಿ ಸಾನಿಧ್ಯದಲ್ಲಿ ಉದ್ಘಾಟನೆ!!

Kalaburagi : ಕಲಬುರಗಿ ಜಿಲ್ಲೆಯ ಜೇವರ್ಗಿಯ ಕಲ್ಲಂಗರಗ ಗ್ರಾಮದಲ್ಲಿ ಕೋಮು ಸೌಹಾರ್ದತೆಯ ಘಟನೆಯೊಂದು ಬೆಳಕಿಗೆ ಬಂದಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಯಾಕೆಂದರೆ ಮುಸ್ಲಿಮರೇ ಇಲ್ಲದ ಗ್ರಾಮದಲ್ಲಿ ಹಿಂದುಗಳೆಲ್ಲರೂ ಸೇರಿ ದರ್ಗಾ ಕಟ್ಟಿ, ಉದ್ಘಾಟನೆ ಕೂಡ ಮಾಡಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಗ್ರಾಮಸ್ಥರು ತಮ್ಮ ಕೊಡುಗೆ ನೀಡಿದ್ದಾರೆ.

ಹೌದು, ಜೇವರ್ಗಿ ತಾಲೂಕಿನ ಕಲ್ಲಹಂಗರಗಾದಲ್ಲಿ ಹಿಂದೂಗಳು ಮಾತ್ರ ವಾಸ ಮಾಡುತ್ತಿದ್ದಾರೆ. ಯಾವೊಂದು ಮುಸ್ಲಿಂ ಕುಟುಂಬವು ಇಲ್ಲಿ ಇಲ್ಲ. ಆದರೂ ಇಲ್ಲಿ ಶಾ ಹುಸೇನಿ ಬಾಷಾ ಎಂಬ ಮುಸ್ಲಿಂ ಮೌಲ್ವಿಯೊಬ್ಬರ ಸಮಾಧಿ ಇದೆ. ಆ ಸಮಾಧಿಯನ್ನು ಹಿಂದೂಗಳೇ ಪೂಜೆ ಮಾಡುತ್ತಿದ್ದಾರೆ. ಪ್ರತಿ ವರ್ಷ ಮೊಹರಂ ಹಬ್ಬವನ್ನು ಕೂಡ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಅಂದಹಾಗೆ ಶತಮಾನಗಳಷ್ಟು ಹಳೆಯದಾದ ಶಿಥಿಲಗೊಂಡ 6×8 ಅಡಿಯ ಸ್ಥಳದ ಚಿಕ್ಕ ಕೊಣೆಯೊಂದರಲ್ಲಿ ಶಾ ಹುಸೇನಿ ಬಾಷಾ ದರ್ಗಾ ಇತ್ತು. ಗ್ರಾಮದ ಯುವಕರೆಲ್ಲ ಸೇರಿಕೊಂಡು ದರ್ಗಾ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು. ಗ್ರಾಮದ ಜನರಿಂದ ₹4 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ. ಕೆಕೆಆರ್ಡಿಬಿ ಅಧ್ಯಕ್ಷರೂ ಆಗಿರುವ ಶಾಸಕ ಡಾ.ಅಜಯಸಿಂಗ್ ಅವರು ದರ್ಗಾ ನಿರ್ಮಾಣಕ್ಕೆ ₹5 ಲಕ್ಷ ಅನುದಾನ ನೀಡಿದ್ದಾರೆ. ಒಟ್ಟು ₹10 ಲಕ್ಷ ಅಂದಾಜು ಮೊತ್ತದಲ್ಲಿ 20×12 ಅಡಿಯ ನಿವೇಶನದಲ್ಲಿ ದರ್ಗಾ ನಿರ್ಮಾಣಗೊಂಡಿದೆ. ಪಕ್ಕದಲ್ಲಿ ಒಂದು ಕೋಣೆಯನ್ನೂ ನಿರ್ಮಿಸಲಾಗಿದೆ.
ನೂತನ ದರ್ಗಾವನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಶುಕ್ರವಾರ ಉದ್ಘಾಟಿಸಿದರು. ನೆಲೋಗಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದರ್ಗಾಕ್ಕೆ ಬಂದ ಭಕ್ತರಿಗಾಗಿ ಅನ್ನಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
Comments are closed.