ರಂಗಸ್ಥಳಕ್ಕೆ ನುಗ್ಗಿ ‘ವಿದ್ಯುನ್ಮಾಲಿ’ಯ ಕುತ್ತಿಗೆ ಹಿಸುಕಲು ನೋಡಿದ ವ್ಯಕ್ತಿ, ದಿಗ್ಭ್ರಮೆಗೊಂಡ ಕಲಾವಿದರು!

ಕಡಬ: ಅಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಕಥೆಯ ಒಳಗೆ ಹೊಕ್ಕು ಉದ್ವೆಗಗೊಂಡು ಪಾತ್ರ ಒಂದರ ಮೇಲೆ ಎರಗಿದ ಘಟನೆ ನಡೆದಿದೆ. ಸಭೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹಠಾತ್ ರಂಗಸ್ಥಳಕ್ಕೆ ನುಗ್ಗಿ ಬಂದು ವೇಷಧಾರಿಯ ಕುತ್ತಿಗೆ ಹಿಡಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ನಂದುಗುರಿಯಲ್ಲಿ ಕಡಬದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ನಂದುಗುರಿ ಅವರ ಮನೆಯಲ್ಲಿ ರಾತ್ರಿ ವೇಳೆ ಸೇವಾರ್ಥ ಕಟೀಲು ಮೇಳದದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ರಂಗಸ್ಥಳದ ಮೇಲೆ ವಿದ್ಯುನ್ಮಾಲಿ ಮತ್ತು ಧಿತಿ ಪಾತ್ರಗಳ ನಡುವೆ ರೋಚಕ ಸಂಭಾಷಣೆ ನಡೆಯುತ್ತಿದ್ದ ವೇಳೆ ಯಕ್ಷಗಾನ ವೀಕ್ಷಿಸುತ್ತಿದ್ದ ಕಡಬದ ಕಳಾರ ನಿವಾಸಿ ರಾಧಾಕೃಷ್ಣ ಎಂಬಾತ ಮೈಮೇಲೆ ಆವೇಶ ಬಂದ ರೀತಿಯಲ್ಲಿ ಹಠಾತ್ ಆಗಿ ರಂಗಸ್ಥಳದ ಮೇಲೇರಿದ್ದಾನೆ. ಅಲ್ಲಿ ರಾಕ್ಷಸ ಪಾತ್ರಧಾರಿ ವಿದ್ಯುನ್ಮಾಲಿಯ ಮೇಲೆರಗಿ ಕುತ್ತಿಗೆ ಹಿಡಿದಿದ್ದಾನೆ.
ಈ ಅನಿರೀಕ್ಷಿತ ಘಟನೆಯಿಂದ ಕಲಾವಿದರು ದಿಗ್ಭ್ರಮೆಗೊಳಗಾಗಿ, ಹಿಮ್ಮೇಳದವರು ಆತನನ್ನು ಹಿಡಿದುಕೊಂಡು ನಂತರ ರಂಗಸ್ಥಳದಿಂದ ಹೊರಗೊಯ್ದರು. ಆತನ ಆವೇಶ ಕಡಿಮೆಯಾಗಲು ತೀರ್ಥ ಪ್ರೋಕ್ಷಣೆ ಮಾಡಲು ಬಂದ ಅರ್ಚಕರ ಮೇಲೇರಗಲು ಕೂಡಾ ಆತ ಹೋಗಿದ್ದಾನೆ.
ತದನಂತರ ಜನರು ಸೇರಿಕೊಂಡು ಆತನನ್ನು ವಾಹನದಲ್ಲಿ ಸುಮಾರು 2 ಕಿ.ಮೀ. ದೂರ ಇರುವ ಆತನ ಮನೆಗೆ ಬಿಟ್ಟು ಬಂದರು. ಆದರೆ ಕೆಲವೇ ಆತ ಯಕ್ಷ ವೇದಿಕೆಯ ಬಳಿ ಜೋರಾಗಿ ಕೂಗು ಹಾಕಿಕೊಂಡು ಪ್ರತ್ಯಕ್ಷನಾಗಿದ್ದಾನೆ. ಮತ್ತೆ ಧಾವಿಸಿ ಬಂದ ಆತನನ್ನು ತಡೆಯಲು ಹೋದ ಜನರ ಮೇಲೆರಗಿ ಗೊಂದಲ ಸೃಷ್ಟಿಸಿದ ವಿಚಿತ್ರ ಘಟನೆ ನಡೆಯಿತು.
Comments are closed.