Beltangadi:ಬೆಳ್ತಂಗಡಿ :ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರು ಇವರ ಪತ್ರಿಕಾ ಪ್ರಕಟಣೆ: ಬೆಳ್ತಂಗಡಿ ತಾಲೂಕು ಸಂಘದ ನಡೆ ಖಂಡನೆ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಇದರ ನೂತನ ಕಟ್ಟಡ ಮತ್ತು ಸಭಾಭವನದ ಲೋಕಾರ್ಪಣಾ ಸಮಾರಂಭವು ದಿನಾಂಕ 20.04.2025 ರಂದು ಆದಿತ್ಯವಾರ ಬೆಳ್ತಂಗಡಿಯ ವಾಣಿ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆಸಲು ಉದ್ದೇಶಿಸಿರುವ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿರುತ್ತದೆ. ಈ ಬಗ್ಗೆ ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರು ಇವರ ಪತ್ರಿಕಾ ಪ್ರಕಟಣೆ ಹೊರಡಿಸಿ ತನ್ನ ಅಸಮಾಧಾನವನ್ನು ಹೊರಹಾಕಿದೆ.
ಪತ್ರಿಕಾ ಪ್ರಕಟನೆಯ ಮುಖ್ಯಾಂಶಗಳು:
“ಒಕ್ಕಲಿಗ ಸಮುದಾಯವು ನಮ್ಮ ರಾಜ್ಯದಲ್ಲಿ ಪ್ರಬಲ ಸಮುದಾಯವಾಗಿದ್ದು ವಿವಿದ ಒಕ್ಕಲಿಗ ಸಂಘಗಳ ಮೂಲಕ ರಾಜ್ಯದಲ್ಲಿ ಹಾಗೂ ಪ್ರತೀ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತದೆ. ರಾಜ್ಯ ಒಕ್ಕಲಿಗ ಸಂಘ ಬೆಂಗಳೂರು ಇವರು ರಾಜ್ಯದಲ್ಲಿರುವ ವಿವಿದ ಒಕ್ಕಲಿಗರ ಸಂಘಗಳಿಗೆ ಆಶ್ರಯವಾಗಿ ಹಲವಾರು ಸಮಾಜಮುಖೀ ಕಾರ್ಯಗಳನ್ನು ನಡೆಸಲು ಸಹಕರಿಸುತ್ತಿದೆ. ಅದೇ ರೀತಿ ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸಂಘವು ದ.ಕ. ಜಿಲ್ಲೆಯ ಸಮಸ್ತ ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.”
“ನಮ್ಮ ಸಮುದಾಯಕ್ಕೆ ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಗುರುಪೀಠವು ಸರ್ವೋಚ್ಛವಾಗಿದ್ದು ಹಿಂದಿನ ಪೀಠಾಧ್ಯಕ್ಷರಾದ ಭೈರವೈಕ್ಯ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ದೂರದೃಷ್ಟಿಯ ಫಲವಾಗಿ ಒಕ್ಕಲಿಗ ಸಮುದಾಯದ ಸಂಘಟನೆಯನ್ನು ಪೀಠವು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಭೈರವೈಕ್ಯ ಪೂಜ್ಯರು 70-80ರ ದಶಕದಲ್ಲೇ ದ.ಕ. ಜಿಲ್ಲೆಗೆ ಆಗಮಿಸಿ ಸಮುದಾಯದ ಸಂಘಟನೆಯನ್ನು ಮಾಡಿ ದ.ಕ. ಜಿಲ್ಲೆಗೆ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠವನ್ನು ಸ್ಥಾಪಿಸಿ ದ.ಕ. ಜಿಲ್ಲೆಯ ಸಮಸ್ತ ಒಕ್ಕಲಿಗ ಸಮುದಾಯದ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತವಾಗಿದೆ.”
“ಸಮಾಜದ ಸಂಘಟನೆಯನ್ನು ಮಾಡುವುದರೊಂದಿಗೆ ಸರ್ವರನ್ನು ಒಗ್ಗೂಡಿಸಿ ಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತಿದ್ದು ನಮ್ಮ ಸಮುದಾಯದ ಶಕ್ತಿಯಾಗಿದ್ದಾರೆ. ಬೆಳ್ತಂಗಡಿ ಒಕ್ಕಲಿಗರ ಯಾನೆ ಗೌಡರ ಸೇವಾಸಂಘದವರು ತಮ್ಮ ಸಂಘದ ಕಚೇರಿ ಹಾಗೂ ಸಭಾಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ಸ್ವಾಮೀಜಿಗಳನ್ನು ಕರೆದು ನಮ್ಮ ಮಠದ ಸ್ವಾಮೀಜಿಗಳನ್ನು ಉದ್ದೇಶಪೂರ್ವಕವಾಗಿಯೇ ಕರೆಯದೆ ಅವಮಾನಿಸಿದ್ದಾರೆ. ಮಾತ್ರವಲ್ಲದೆ ಎರಡು ಧಾರ್ಮಿಕ ಪೀಠಗಳ ನಡುವೆ ವೈಶಮ್ಯ ತರುವ ನಿಟ್ಟಿನಲ್ಲಿ ಮಾಡುವ ಕಾರ್ಯ ಇದಾಗಿದೆ. ಈ ವಿಷಯ ನಮಗೆ ಬಹಳ ಆಶ್ಚರ್ಯ ಮತ್ತು ಬೇಸರವನ್ನು ಉಂಟು ಮಾಡಿದೆ.”
“ನಮ್ಮ ಸಮಾಜದ ಗುರುಗಳಿಗೆ ಅವಮಾನಿಸುತ್ತಿರುವ ಬೆಳ್ತಂಗಡಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವರ್ತನೆಯನ್ನು ಅತ್ಯುರ್ಗವಾಗಿ ಖಂಡಿ ಖಂಡಿಸುತ್ತಿದ್ದೇವೆ. ಬಹಳ ವರ್ಷಗಳ ಹಿಂದಿನಿಂದಲೂ ಆದಿಚುಂಚನಗಿರಿ ಸ್ವಾಮಿಗಳ ನೇತೃತ್ವದಲ್ಲಿಯೇ ಅನೇಕ ಕಾರ್ಯಕ್ರಮಗಳು ಜರುಗಿದ್ದು ಮಾತ್ರವಲ್ಲ ಗ್ರಾಮಗ್ರಾಮ ಭೇಟಿಕೊಡುವ ಮೂಲಕ ಸಂಘಟನೆಯಾಗಿದ್ದು ಇಂದು ಕೆಲವು ವ್ಯಕ್ತಿಗಳಿಂದ ಶ್ರೀ ಮಠಕ್ಕೆ ಅವಮಾನ ಮಾಡುವುದರ ಮೂಲಕ ಇಡೀ ಒಕ್ಕಲಿಗ ಸಮುದಾಯಕ್ಕೆ ಅವಮಾನಿಸುತ್ತಾರೆ. ಆದ್ದರಿಂದ ಶ್ರೀಮಠಕ್ಕೆ ಕ್ಷಮೆಯಾಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷರಾದ ಶ್ರೀ ಡಿ.ಬಿ. ಬಾಲಕೃಷ್ಣ ಅವರ ನೇತೃತ್ವದಲ್ಲಿ ಸರ್ವಸದಸ್ಯರುಗಳ ಖಂಡನಾರ್ಹ ನಿರ್ಣಯ ಇದಾಗಿದೆ. ತಾವುಗಳು ದಯವಿಟ್ಟು ತಮ್ಮ ಪತ್ರಿಕಾ ಮಾಧ್ಯಮದಲ್ಲಿ ಪ್ರಕಟಿಸಬೇಕಾಗಿ ವಿನಂತಿಸಿಕೊಳ್ಳುತೇವೆ.”
Comments are closed.