ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ವರ್ಕಾಡಿ ಹೊಸಮನೆ ಬ್ರಹ್ಮಶ್ರೀ ರಾಜೇಶ ತಾಳಿತ್ತಾಯ ತಂತ್ರಿಯವರ ನೇತೃತ್ವದಲ್ಲಿ 30-03-2025ನೇ ಆದಿತ್ಯವಾರದಿಂದ 06-04-2025ನೇ ಆದಿತ್ಯವಾರದ ತನಕ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಕೂಟತ್ತಜೆ ಕ್ಷೇತ್ರವು ಕರ್ನಾಟಕದ ಗಡಿಭಾಗವಾಗಿದ್ದು ತುಳು, ಕನ್ನಡವೇ ಪ್ರಧಾನ ಭಾಷೆಯಾಗಿರುವ ಪ್ರದೇಶವಾಗಿರುತ್ತದೆ. ‘ಮೂವೆರ್ ದೈಯೊಂಗುಳು’ ಎಂದು ಭಕ್ತಿಯಿಂದ ಕರೆಯಲ್ಪಡುವ ಕೂಟತ್ತಜೆ ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ತೋಡಕುಕ್ಕಿನಾರ್ ಪ್ರಧಾನ ದೈವಗಳಾಗಿ ಪರಿವಾರ ದೈವಗಳೊಂದಿಗೆ ಸಾಂಪ್ರದಾಯಿಕ ವೈಶಿಷ್ಟ್ಯದೊಂದಿಗೆ ಆರಾಧನೆಗೊಳ್ಳುತ್ತಿವೆ. ಪುರಾತನ ಐತಿಹ್ಯ ಹೊಂದಿರುವ ಕೂಟತ್ತಜೆ ಕ್ಷೇತ್ರದ ಸಾನ, ಮಾಡ ಮತ್ತು ಭಂಡಾರ ಮನೆಗಳು ಇದೀಗ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಂಡಿವೆ. ಕ್ಷೇತ್ರದ ದೈವಿಕ ಕಾರ್ಯಕ್ರಮಗಳ ಜೊತೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳೂ ನಿಗದಿಯಾಗಿದ್ದು ಕ್ಷೇತ್ರವ್ಯಾಪ್ತಿಯ ‘ಮೂಜಿ ಊರು ಐನ್ ಗ್ರಾಮ’ಗಳು ಭಕ್ತಿ ಸಂಭ್ರಮಗಳಿಗೆ ಸಜ್ಜುಗೊಂಡಿವೆ.

ದಿನಾಂಕ 30-03-2025ನೇ ಅದಿತ್ಯವಾರದಿಂದ 06-04-2025ನೇ ಆದಿತ್ಯವಾರದವರೆಗೆ ಬ್ರಹ್ಮಕಲಶೋತ್ಸವದ ದೈವಿಕ ಕಾರ್ಯಗಳು ಕೂಟತ್ತಜೆ ಕ್ಷೇತ್ರದ ಬದಿಯಾರ್ ಸಾನ, ಪಡಿಕಲ್ಲು ಭಂಡಾರಮನೆ ಮತ್ತು ಮಾಡಗಳಲ್ಲಿ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ಈ ಸಾನ್ನಿಧ್ಯಗಳ ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. ಭಕ್ತಜನರು ತಮ್ಮ ಸೇವಾಭೀಷ್ಟಗಳನ್ನು ಪೂರೈಸಿಕೊಳ್ಳಲು ತಾಮ್ರ ಕಲಶಾದಿ ಸೇವೆಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಜೀರ್ಣೋದ್ದಾರ ಟ್ರಸ್ಟ್ ಮೂಲಕ ಸಹಾಯಧನವನ್ನು ಕೃತಜ್ಞತೆಯಿಂದ ಸ್ವೀಕರಿಸುವ ಸೌಲಭ್ಯವಿದೆ.

ದಿನಾಂಕ 30-03-2025ನೇ ಆದಿತ್ಯವಾರ ಮಧ್ಯಾಹ್ನ 3-30ಕ್ಕೆ ಹಸಿರು ಹೊರೆಕಾಣಿಕೆಯು ವಿವಿಧ ಪ್ರದೇಶಗಳಿಂದ ಸಂಗ್ರಹಗೊಂಡು ಮುಡಿಪು ಮುಡಿಪಿನ್ನಾರ್ ದೈವಸ್ಥಾನದ ಬಳಿಯಲ್ಲಿ ಒಟ್ಟುಸೇರಿ ಅಲ್ಲಿಂದ ಭವ್ಯವಾದ ಬೃಹತ್ ಮೆರವಣಿಗೆಯು ಹೂಹಾಕುವಕಲ್ಲು, ನಂದರಪದವು ಪ್ರದೇಶಗಳಲ್ಲಿ ಹಾದು ಕೂಟತ್ತಜೆ ಕ್ಷೇತ್ರವನ್ನು ತಲುಪಲಿದೆ.

ಧಾರ್ಮಿಕ ಸಭಾಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು, ನಾಡಿನ ಪ್ರಸಿದ್ಧ ವ್ಯಕ್ತಿಗಳು, ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದು ಸಾನ್ನಿಧ್ಯವು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ. ಪ್ರಸಿದ್ಧ ಕಲಾವಿದರ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿದ್ದು ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಆಕರ್ಷಿಸಲಿದೆ. ಪ್ರತಿನಿತ್ಯ ಅನ್ನದಾನಾದಿ ಸೇವೆಗಳ ಸೌಲಭ್ಯವಿದೆ. ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ಸ್ವಚ್ಛತೆಯಿಂದ ಪವಿತ್ರವಾಗಿ ನೆರವೇರಿಸಬೇಕೆಂಬ ಆಶಯವೂ ನಮ್ಮದಾಗಿದೆ.

ವರ್ಷಂಪ್ರತಿ ಕೂಟತ್ತಜೆ ಕ್ಷೇತ್ರದಲ್ಲಿ ಮಾಯಿ ತಿಂಗಳ ಹುಣ್ಣಿಮೆಗೆ ಕೋಳಿಗೂಟವಾಗಿ ಸುಗ್ಗಿ ತಿಂಗಳ ಹುಣ್ಣಿಮೆಗೆ ಐದು ದಿವಸಗಳ ಜಾತ್ರೆ ನಡೆಯುತ್ತದೆ. ಈ ಬಾರಿ ದಿನಾಂಕ 10-04-2025ಕ್ಕೆ ಧ್ವಜಾರೋಹಣಗೊಂಡು 14-04-2025ರ ತನಕ ಕೂಟಜೆ ಜಾತ್ರೆ ನಡೆಯಲಿದೆ.

ಐದು ಗ್ರಾಮಗಳ ವಿಶಾಲ ಸೀಮೆಯನ್ನು ಹೊಂದಿರುವ ಕೂಟತ್ತಜೆ ಕ್ಷೇತ್ರದ ಭಕ್ತಾಭಿಮಾನಿಗಳು ಈಗ ದೇಶ ವಿದೇಶಗಳಲ್ಲಿ ಪಸರಿಸಿದ್ದು ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರೆಲ್ಲ ಭಾಗವಹಿಸುವ ನಿರೀಕ್ಷೆಯಿಟ್ಟುಕೊಂಡಿದ್ದೇವೆ.

ಶ್ರೀ ಕ್ಷೇತ್ರದ ತಂತ್ರಿಗಳು, ಗಡಿಪ್ರಧಾನರು, ಆಡಳಿತ ಮಂಡಳಿ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಮೂಜೂರು ಐನ್ ಗ್ರಾಮದ ಭಕ್ತರು

 

Comments are closed.