Koragajja: ಮಂಗಳೂರಿನ ಕುತ್ತಾರಿನ ಕೊರಗಜ್ಜನ ದೈವಸಾನಿಧ್ಯದಲ್ಲಿ ನಟ ದರ್ಶನ್‌ ತೂಗುದೀಪ

Koragajja; ನಟ ದರ್ಶನ್‌ ತೂಗುದೀಪ್‌ ಅವರು ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ ನಟ ದರ್ಶನ್‌ ಅವರು ಮಂಗಳೂರು ಹೊರವಲಯದ ಕುತ್ತಾರಿನ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದ ಮಂದಿ ದರ್ಶನ್‌ ಅವರಲ್ಲಿ ಏನ್‌ ಬೇಡಿಕೆ ಸಲ್ಲಿಸಿದ್ರಿ ಕೊರಗಜ್ಜನಲ್ಲಿ ಎಂದು ಪ್ರಶ್ನೆ ಮಾಡಿದ್ದಕ್ಕೆ, ಬೇಡಿಕೆ ನಿಮ್ಮಲ್ಲಿ ಹೇಳಿದ್ರೆ ನೀವು ನೆರವೇರಿಸ್ತೀರಾ? ಎಂದು ಮರುಪ್ರಶ್ನೆ ಹಾಕಿದ್ದಾರೆ. ಸುಮಲತಾ ಪರ ಪ್ರಚಾರದ ಕುರಿತು ಕೇಳಿದ್ದಕ್ಕೆ, ಗರಂ ಆಗಿ ಮುನ್ನಡೆದು, ಹೆತ್ತ ತಾಯಿನ ನೀವೇನಾದರೂ ಬಿಟ್ಟು ಕೊಡ್ತೀರಾ ಸರ್‌ ಎಂದು ಮತ್ತೊಮ್ಮೆ ಮರು ಸವಾಲು ಹಾಕಿದ್ದಾರೆ. ಅಮ್ಮ ಅಮ್ಮನೇ ಸರ್‌, ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ, ಈಗ ಅವರ ಕೈ ಬಿಡುವೆನಾ? ಎಂದು ಹೇಳಿದ್ದಾರೆ.

ಮಂಗಳೂರಿಗೆ ನಾನು ಅನೇಕ ಬಾರಿ ಬಂದಿದ್ದೇನೆ. ಆದರೆ ಇವತ್ತೇ ಮೊದಲ ಬಾರಿ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದು. ತುಂಬಾ ಖುಷಿ ಆಗಿದೆ. ದೈವಾರಾಧನೆಯ ಚಿತ್ರ ನಿರ್ಮಾಣದ ಕುರಿತು ಯಾವುದೇ ಯೋಜನೆ ಇಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಂದ ಹಾಗೆ ನಟ ದರ್ಶನ್‌ ಅವರ ಜೊತೆ ಹಾಸ್ಯ ನಟ, ನಟ ಚಿಕ್ಕಣ್ಣ ಕೂಡಾ ಜೊತೆಗಿದ್ದು, ಇನ್ನೂ ಹಲವು ಮಂದಿ ದರ್ಶನ್‌ ಸ್ನೇಹಿತರು ಜೊತೆಗಿದ್ದರು.

ಕೊರಗಜ್ಜನ ಆಡಳಿತ ಮಂಡಳಿ ಮುಖ್ಯಸ್ಥರು ನಟ ದರ್ಶನ್‌ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.

Leave A Reply

Your email address will not be published.