ಅತೀ ಶೀಘ್ರದಲ್ಲೇ ‘ಧರ್ಮಸ್ಥಳ ಫೈಲ್ಸ್’ ?: 400 ಕೊಲೆಗಳ ಹಿನ್ನೆಲೆಯ ಈ ಸಿನಿಮಾ ಯಾಕೆ ಬೇಕು ?

Dharmasthala :ಕಳೆದ ಹನ್ನೆರಡು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಪುಣ್ಯ ಸ್ಥಳ ಧರ್ಮಸ್ಥಳದ (Dharmasthala)ನೇತ್ರಾವತಿ ಸ್ನಾನಘಟ್ಟದ ಬಳಿಯಲ್ಲೇ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮತ್ತೊಮ್ಮೆ ತನಿಖೆಯಾಗಬೇಕೆಂದು ವ್ಯಾಪಕ ಆಗ್ರಹವಾಗುತ್ತಿರುವ ಮಧ್ಯೆಯೇ ಮಕ್ಕಳ ನ್ಯಾಯಾಲಯವು ಅಂದಿನ ತನಿಖಾಧಿಕಾರಿಯನ್ನೇ ತನಿಖೆಗೆ ಒಳಪಡಿಸಬೇಕು ಎಂದಿದೆ. ಅಲ್ಲದೇ ನಾಗರೀಕ ಸಮಾಜ ಮತ್ತೊಮ್ಮೆ ಒಟ್ಟಾಗಿ ಮರು ತನಿಖೆಗೆ ಆಗ್ರಹಿಸಿದ್ದು, ಇದರ ಬೆನ್ನಲ್ಲೇ ‘ಧರ್ಮಸ್ಥಳ ಫೈಲ್ಸ್’ ಸಿನಿಮಾವೊಂದರ ಸುಳಿವೊಂದು ಪ್ರಚಲಿತದಲ್ಲಿದೆ.

ಹೌದು, ಪುಣ್ಯ ಕ್ಷೇತ್ರ ಹಾಗೂ ಅಲ್ಲಿನ ವಿಶೇಷತೆ ಜೊತೆಗೆ ಅಲ್ಲಿ ಸುತ್ತ ಮುತ್ತ ನಡೆಯುತ್ತಿದ್ದ ಅಕ್ರಮ ಕೃತ್ಯಗಳ ಕಥೆಗಳನ್ನೊಳಗೊಂಡ ಕಥೆಯನ್ನು ಸಮಾಜದ ಮುಂದಿಡುವ ಬೃಹತ್ ಪ್ಲಾನ್ ಒಂದು ನಡೆದಿದೆ ಎನ್ನಲಾಗಿದ್ದು, ಸುಮಾರು 400 ಕ್ಕೂ ಹೆಚ್ಚು ಅನಾಥ ಶವ, ಅಸಹಜ ಸಾವು ಪ್ರಕರಣಗಳು ಮತ್ತೊಮ್ಮೆ ಸುದ್ದಿಯಾಗಲಿದೆ. ಸೌಜನ್ಯ ಕೊಲೆ ಪ್ರಕರಣ ಬೆಳಕಿಗೆ ಬರುವ ಹಿಂದೆ ಹಲವು ದಶಕಗಳಿಂದ ನೂರಾರು ಕೊಲೆಗಳು ಅತ್ಯಾಚಾರಗಳು ಆ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದ್ದು, ನಡೆದಿದ್ದ ಅಷ್ಟೂ ಪ್ರಕರಣಗಳು ಸುದ್ದಿ ಇಲ್ಲದಂತಾಗಿದೆ, ಅವುಗಳನ್ನು ಮತ್ತೊಮ್ಮೆ ಸಮಾಜಕ್ಕೆ ತಿಳಿಸುವ ಪ್ರಯತ್ನ ಸಿನಿಮಾದ ಉದ್ದೇಶವಾಗಿದೆಯಂತೆ.

1989 ರಲ್ಲಿ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾ ಸಾವು ಆಗ ಕೂಡಾ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ಅವತ್ತು ರಾಜ್ಯ ಮಟ್ಟದ ಕೆಲವು ಕರೇಜಿಯಸ್ ಪತ್ರಿಕೆಗಳು ಯಾರ ಭಯವಿಲ್ಲದೆ, ಹಂಗಿಲ್ಲದೆ ಪದ್ಮಲತ ಕೊಲೆ ಪ್ರಕರಣದ ಬಗ್ಗೆ ಬರೆದಿದ್ದು, ತಮ್ಮ ಕೈಲಾದ ಪ್ರತಿಭಟನೆಯನ್ನು ನಡೆಸಿದ್ದವು. ಸೌಜನ್ಯ ಪ್ರಕರಣದಂತೆಯೇ ಅಂದು ಪದ್ಮಲತಾ ಪ್ರಕರಣವೂ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣಗಳ ಪ್ರಚಾರ, ಮಾಧ್ಯಮ ಪ್ರಚಾರ ಇಲ್ಲದ ಆ ಕಾಲದಲ್ಲಿ ಉಳ್ಳವರ ಮಾತನ್ನು ಧಿಕ್ಕರಿಸಿ ನಡೆದರೆನ್ನುವ ಒಂದೇ ಒಂದು ಕಾರಣಕ್ಕಾಗಿ ಹೋರಾಟಗಾರರ ಮಗಳನ್ನೇ ಕಾಣೆ ಮಾಡಲಾಗಿತ್ತು. ಹಲವು ದಿನಗಳ ಹೋರಾಟ, ಮನವಿ ಆಗ್ರಹ, ಉಪವಾಸ ಸತ್ಯಾಗ್ರಹದ ಬಳಿಕ ಪದ್ಮಲತಾ ಶವ ಕೊಳೆತ ರೀತಿಯಲ್ಲಿ ಪತ್ತೆಯಾಗಿದ್ದು, ಮೈಮೇಲಿನ ಬಟ್ಟೆಯ ಗುರುತಿನಿಂದ ಆಕೆಯ ಶವವೆನ್ನುವುದನ್ನು ಸ್ಪಷ್ಟಪಡಿಸಲಾಗಿತ್ತು.

ಅಂದಿಗೆ ಆ ಪ್ರಕರಣದಿಂದ ಬಚಾವ್ ಆಗಿದ್ದ ಹಂತಕರಿಂದ ನಂತರದಲ್ಲಿ ಒಂದೊಂದೇ ಪ್ರಕರಣ ನಡೆಯುತ್ತಲೇ ಹೋಯಿತು. ವರ್ಷಕ್ಕೆ ಕೆಲವು ಪ್ರಕರಣ, ಅದರಲ್ಲೂ ಮಹಿಳೆಯರೇ ಹೆಚ್ಚಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದರೂ ಎಲ್ಲವೂ ಅಸಹಜ ಸಾವೆಂದು ಮುಚ್ಚಿಹೋಗುತ್ತಿತ್ತು.

ಸಿನಿಮಾ ಬರಬೇಕು ಎನ್ನುವ ಆಗ್ರಹದೊಂದಿಗೆ ವೈರಲ್ ಆಗುತ್ತಿರುವ ಪೋಸ್ಟರ್

 

ಇಲ್ಲಿಯವರೆಗೆ, ಸೌಜನ್ಯಾ ಗೌಡ ಹತ್ಯೆ ಪ್ರಕರಣ ಬಿಟ್ರೆ, ಪದ್ಮಲತಾ ಸಾವಿನ ಪ್ರಕರಣ ಮಾತ್ರ ದೊಡ್ಡದಾಗಿ ಪ್ರಚಾರ ಪಡೆದುಕೊಂಡದ್ದು. ಉಳಿದ ಎಲ್ಲಾ ಸಾವಿನ ವಿರುದ್ಧದ ದನಿಯ ಕತ್ತನ್ನು ಕಗ್ಗತ್ತಲಲ್ಲೆ ಹಿಸುಕಿ ಹಾಕಲಾಗಿತ್ತು. ಅಸಲಿಗೆ ಒಂದೇ ಒಂದು ಕೊಲೆಯ ತನಿಖೆ ಇಲ್ಲಿಯ ತನಕ ನಿಯತ್ತಿನಲ್ಲಿ ನಡೆದಿಲ್ಲ. ಆಗ ಪದ್ಮಲತಾ ಸಾವಿನ ಸುದ್ದಿ ಮಾತ್ರ ಒಂದಷ್ಟು ಸುದ್ದಿ ಮಾಡಿ ನಂತರ ಅದೂ ಸತ್ತು ಹೋಯಿತು. ಅಲ್ಲಿಂದ ಸೌಜನ್ಯ ಗೌಡ ಪ್ರಕರಣದವರೆಗೂ ಠಾಣೆಯಲ್ಲಿ ದಾಖಲಾದ ಸುಮಾರು 400 ಪ್ರಕರಣ, ಅದರಲ್ಲೂ ಸ್ಥಳೀಯ 90 ಮಹಿಳೆಯರ ಸಾವಿನ ಪ್ರಕರಣಗಳೂ ಸೇರಿದ್ದು ಎಲ್ಲವೂ ಭೂತ ಕಾಲಕ್ಕೆ ಸರಿದು ಹೋಗಿವೆ. ಅಂತಹ ನತದೃಷ್ಟ ಮಹಿಳೆಯರ ಆರ್ತನಾದಗಳು ನೇತ್ರಾವತಿ ನದಿಯ ಪಕ್ಕದ ಗಹನ ಕಾಡುಗಳಲ್ಲಿ ಹೊರಬರಲಾರದೆ ಸಿಕ್ಕಿಕೊಂಡು ಇವತ್ತಿಗೂ ನರಳುತ್ತಿವೆ. ಅವುಗಳಿಗೆ ಒಂದು ಮುಕ್ತಿ ಸಿಗಬೇಕಿದ್ದರೆ ದೊಡ್ಡ ಪ್ರಮಾಣದಲ್ಲಿ ತನಿಖೆ ನಡೆಯಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಅಂತರಾಷ್ಟ್ರೀಯ ಮಾಧ್ಯಮಗಳ ಗಮನಕ್ಕೆ ಬರಬೇಕು. ಅದಕ್ಕಾಗೇ ಕೇಳಿ ಬಂದದ್ದು ಈ ‘ ಧರ್ಮಸ್ಥಳ ಫೈಲ್ಸ್ ‘ ಎಂಬ ಸಿನಿಮಾಕ್ಕೆ ಒತ್ತಾಯ !

ಇವತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ದಿ ಕಾಶ್ಮೀರಿ ಫೈಲ್ಸ್, ದಿ ಕೇರಳ ಸ್ಟೋರಿ ನಂತಹ ನೈಜ ಕಥೆಗಳನ್ನು ಒಳಗೊಂಡ ಸಿನಿಮಾಗಳನ್ನು ರಾಷ್ಟ್ರ ವಿದೇಶಗಳು ಮೆಚ್ಚಿಕೊಂಡಿವೆ. ಹಲವು ಕಡೆಗಳಲ್ಲಿ ಟೀಕೆ ಕೂಡ ಕೇಳಿ ಬಂದಿದೆ. ದೃಶ್ಯ ಮಾಧ್ಯಮವಾದ ಸಿನಿಮಾದ ಉದ್ದೇಶವೇ ಅದು. ಮೊದಲು ಜನರನ್ನು ತಲುಪುವುದು ಮತ್ತು ಯೋಚನೆಗೆ, ಪ್ರತಿಭಟನೆಗೆ ಹಚ್ಚುವುದು. ಈಗಾಗಲೇ ಹಲವು ಹೋರಾಟಗಾರರು ಕಾಶ್ಮೀರಿ ಫೈಲ್ಸ್ ರೀತಿಯಲ್ಲಿಯೇ ಧರ್ಮಸ್ಥಳ ಫೈಲ್ಸ್ ಎನ್ನುವ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತೆಗೆಯಬೇಕು ಎನ್ನುವ ಕೂಗು ಎಬ್ಬಿಸಿದ್ದಾರೆ. ನಿಧಾನಕ್ಕೆ ಇದು ಹೋರಾಟದ ರೂಪು ಪಡೆದುಕೊಳ್ಳುತ್ತಿದ್ದು ಧರ್ಮಸ್ಥಳ ಫೈನಾನ್ಸ್ ಸಿನಿಮಾ ಬರುವುದು ಖಚಿತವಾದಂತಿದೆ.

ನಿರಂತರ ಹೋರಾಟಗಾರರ ದನಿಯಾಗಿದ್ದ TV 9 ಕನ್ನಡ

 

2012 ರವರೆಗೆ ಒಂದೊಂದೇ ಎಂಬಂತೆ 400 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಸೌಜನ್ಯ ಪ್ರಕರಣ ತೀವ್ರ ಸ್ವರೂಪದ ಹೋರಾಟಕ್ಕೆ ಕಾರಣವಾಗಿದ್ದು ಬಿಟ್ಟರೆ, ಬೇರೆ ಇಲ್ಲಿ ನಡೆದ ಯಾವುದೇ ಕೊಲೆ ಅತ್ಯಾಚಾರಗಳು ಯಾರದೇ ಗಮನ ಸೆಳೆದಿಲ್ಲ. ಅವತ್ತು, ಕಡೆಯ ತನಕ ಕನ್ನಡದ ಹೆಮ್ಮೆಯ TV 9 ಮಾಧ್ಯಮ ಮಾತ್ರ ಸೌಜನ್ಯಾ ಪರ ಹೋರಾಟಗಾರರ ದನಿಯಾಗಿ ನಿಂತಿತ್ತು. ಈಗ ಮುಂದೆ ಸೌಜನ್ಯ ಗೌಡ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಖುಲಾಸೆಯಾಗುವುದರೊಂದಿಗೆ, ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇವುಗಳ ಬೆನ್ನಲ್ಲೇ ರಾಜ್ಯದ ಖ್ಯಾತ ಹಲವು ಸಂಘಟನೆಗಳು ಮರು ತನಿಖೆಗೆ ದನಿಯೆತ್ತಿದೆ. ಸೌಜನ್ಯ ಗೌಡಳಂತಹ 400 ಕ್ಕೂ ಅಧಿಕ ಕೊಲೆ ಹಿನ್ನೆಲೆಯ ಕಥೆಯನ್ನು ಒಳಗೊಂಡ ‘ ಧರ್ಮಸ್ಥಳ ಫೈಲ್ಸ್ ‘ ಸಿನಿಮಾವನ್ನು ಜನ ಹತಾಶೆಯಿಂದ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ :ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಜತೆ ನೀಲಿ ತಾರೆ ಮಲ್ಕೋವಾ

Leave A Reply

Your email address will not be published.