Karnataka Election: ಜಮೀರ್ ವಿರುದ್ಧ ಜಮಾಯಿಸಿದ ಕೊಳೆಗೇರಿ ಜನ: ಚಾಮರಾಜಪೇಟೆ ಕ್ಷೇತ್ರದಲ್ಲಿ ‘ ನಮ್ದುಕೆ ‘ ಈ ಸಲ ಕಷ್ಟ ಐತಿ !

Zameer Ahmed Khan : ಬಿಸಿಲ ಬೇಗೆ ಹೆಚ್ಚಾದಂತೆ ಚುನಾವಣೆಯ (Karnataka Election) ಕಾವು ಹೆಚ್ಚಾಗಿದೆ. ನಾಮಪತ್ರ ಸಲ್ಲಿಕೆಯ ದಿನವೂ ಮುಕ್ತಾಯವಾಗಿದೆ. ಅಭ್ಯರ್ಥಿಗಳು ಪಕ್ಷದ ಗೆಲುವಿಗಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಜಮೀರ್ ಅಹ್ಮದ್ (B. Z. Zameer Ahmed Khan) ಕಣಕ್ಕೆ ಇಳಿದಿದ್ದು, ಈ ಬಾರಿ ಗೆಲುವು ಸಾಧಿಸಲು ಶತಪ್ರಯತ್ನಪಟ್ಟರೂ ಗೆಲವು ಕಷ್ಟವೇ ಸರಿ.

ಕ್ಷೇತ್ರದಲ್ಲಿ ಜಮೀರ್ (Zameer Ahmed) ವಿರುದ್ಧ ಬಿಜೆಪಿಯ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಕಣಕ್ಕಿಳಿದಿದ್ದಾರೆ. ಈ ಬಾರಿ ಚಾಮರಾಜಪೇಟೆ ಕ್ಷೇತ್ರದಲ್ಲಿ ‘ಕೈ’ (congress) ಗೆಲುವು ಸಿಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಯಾಕಂದ್ರೆ ಜಮೀರ್ ವಿರುದ್ಧ ಕೊಳೆಗೇರಿ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ (Chamrajpet) ಬಗೆಹರಿಯದ ಸಮಸ್ಯೆ ಒಂದೆರಡಲ್ಲ. ಜಮೀರ್ ಈ ಹಿಂದೆ ಗೆಲುವು ಸಾಧಿಸಿದ್ದಾಗ ಬದಲಾವಣೆ ಮಾಡಿದ್ದರೂ ಯಾವುದೂ ಪ್ರಯೋಜನಕ್ಕಿಲ್ಲ. ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ ಎಂದು ಹೇಳಲಾಗಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಗೆಲುವು ಸಾಧಿಸಿದರೆ ಚಾಮರಾಜಪೇಟೆ ಬದಲಾವಣೆ ಆಗುತ್ತದೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ.

“ಜಮೀರ್ ಆರೋಗ್ಯ, ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಅಗತ್ಯವಿರುವವರಿಗೆ ಹಣವನ್ನು ನೀಡುತ್ತಾರೆ. ಆದರೆ ಕ್ಷೇತ್ರದಲ್ಲಿ ಸಾವಿರಾರು ಬಡವರಿದ್ದು, ಅವರೆಲ್ಲ ಹಣಕ್ಕಾಗಿ ಅವರ ಮನೆ ಮುಂದೆ ಹೋಗಿ ನಿಲ್ಲಲು ಸಾಧ್ಯವಿಲ್ಲ. ಶಾಸಕರಾಗಿ ತಾತ್ಕಾಲಿಕ ಪರಿಹಾರವಾಗಿ ಹಣವನ್ನು ನೀಡುವ ಬದಲು ಅವರ ಬಡತನವನ್ನು ದೂರಮಾಡಲಿ. ಅಲ್ಲದೆ, ನಿರುದ್ಯೋಗಿ ಯುವಕರು ಕುಡಿದು ರಾತ್ರಿ ವೇಳೆ ಕಳ್ಳತನಕ್ಕೆ ಕೈಹಾಕುತ್ತಾರೆ. ಪೊಲೀಸರು ಕ್ಷೇತ್ರದಲ್ಲಿ ಹೆಚ್ಚಿನ ಗಸ್ತು ತಿರುಗಬೇಕು. ಆರ್ಥಿಕ ನೆರವು ಪಡೆದವರು ಯಾವತ್ತೂ ಶಾಸಕರ ವಿರುದ್ಧ ಅಥವಾ ಕ್ಷೇತ್ರದ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದಿಲ್ಲ” ಎಂದು ಹಳೇ ಗುಡ್ಡದಹಳ್ಳಿ ನಿವಾಸಿ ಶರತ್‌ಕುಮಾರ್ ಕೆ.ಪಿ ಹೇಳಿದರು.

ದಿನಗೂಲಿ ಕಾರ್ಮಿಕ ಹಾಗೂ ಅಂಜನಪ್ಪ ಗಾರ್ಡನ್ ನಿವಾಸಿ ಪುರುಷೋತ್ತಮನ್ ಎಂಬುವವರು ಮಾತನಾಡಿದ್ದು, “ಕ್ಷೇತ್ರದ ಅರ್ಧ ಭಾಗವು ಕೊಳಗೇರಿ ಪ್ರದೇಶಗಳಿಂದ ಕೂಡಿದೆ. ಅಂಜನಪ್ಪ ಗಾರ್ಡನ್, ಸಿದ್ದಾರ್ಥನಗರ, ಛಲವಾದಿಪಾಳ್ಯ, ಗೋರಿಪಾಳ್ಯ, ಜಗಜೀವನರಾಮ್ ನಗರ ಮತ್ತು ಇತರೆ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹರಿಯುತ್ತವೆ. ಕಸದ ತೊಟ್ಟಿಗಳು ಕೊಳೆತು ನಾರುತ್ತವೆ. ಅಲ್ಲಿನ ಪ್ರದೇಶದಲ್ಲಿ ಓಡಾಡಲೂ ಸಾಧ್ಯವಿಲ್ಲದಂತಾಗಿದೆ. ನಮಗೆ ಕೊಳಚೆ ನೀರು ಮಿಶ್ರಿತ ಪೈಪ್‌ಲೈನ್‌ನಗಳನ್ನು ನೀಡಲಾಗಿದೆ.

ಈ ಬಗ್ಗೆ ಎಷ್ಟೇ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆ.ಆರ್.ಮಾರುಕಟ್ಟೆಯನ್ನು ಕಳಪೆ ನಿರ್ವಹಣೆ ಮಾಡಲಾಗುತ್ತಿದೆ. ಮಾರುಕಟ್ಟೆ ದೊಡ್ಡ ಕಸದ ರಾಶಿಗಳಿಂದ ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಕ್ರಮ ಕೈಗೊಂಡಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.

ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಅವರು ಮಾತನಾಡಿದ್ದು, “ನಗರದ ಹೃದಯಭಾಗದಲ್ಲಿರುವ ಚಾಮರಾಜಪೇಟೆ ಕ್ಷೇತ್ರವು ಬಡತನ, ತುಂಬಿ ಹರಿಯುವ ಒಳಚರಂಡಿ ಮತ್ತು ಅಪರಾಧಗಳಿಂದ ಕೂಡಿದೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ದೂರದ ಹಳ್ಳಿಗಳಲ್ಲಿ ಚಾಮರಾಜಪೇಟೆಗಿಂತ ಉತ್ತಮ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಇವೆ. ಅಪರಾಧವು ಬಡತನದೊಂದಿಗೆ ನಿಕಟ ಸಂಪರ್ಕ ಹೊಂದಿದೆ.

ಇದನ್ನು ನಿರ್ಮೂಲನೆ ಮಾಡಬೇಕು. ನಾನು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸುಧಾರಿಸುವುದರ ಹೊರತಾಗಿ ನೈರ್ಮಲ್ಯವನ್ನು ಸುಧಾರಿಸುವುದು ಮತ್ತು ಶುದ್ಧ ಕುಡಿಯುವ ನೀರು ಒದಗಿಸುತ್ತೇನೆ‌. ಜನರು ಬಿಜೆಪಿಯನ್ನು ಆಯ್ಕೆ ಮಾಡುವ ಮೂಲಕ ಚಾಲ್ತಿಯಲ್ಲಿರುವ ದುರಾಡಳಿತವನ್ನು ಕೊನೆಗೊಳಿಸಬೇಕು” ಎಂದು ಹೇಳಿದ್ದಾರೆ.

Leave A Reply

Your email address will not be published.