DK Suresh: ಕನಕಪುರಕ್ಕೆ ಅಶೋಕ್ ಎಂಟ್ರಿಯಿಂದ ಕನಲಿ ಕೆಂಡವಾದ ಡಿಕೆಶಿ ; ಪದ್ಮನಾಭ ನಗರಕ್ಕೆ ಡಿಕೆ ಸುರೇಶ್ – WAR BEGUN !

DK Suresh to Padmanabha Nagar : ಕರ್ನಾಟಕದ ಚುನಾವಣಾ ಅಖಾಡ ಕ್ಷಣಕ್ಷಣಕ್ಕೂ ಹೊಸ ರಂಗು ಪಡೆದುಕೊಳ್ಳುತ್ತಿದೆ. ಅಂತಹಾ ಒಂದು ಹೊಸ ಬೆಳವಣಿಗೆಯೊಂದು ಬೆಂಗಳೂರಿನಲ್ಲಿ ಇದೀಗ ತಾನೇ ನಡೆದಿದೆ. ಪದ್ಮನಾಭ ನಗರ ಕ್ಷೇತ್ರದಲ್ಲಿ ಘೋಷಿತ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡುಗೆ ನಾಮಪತ್ರ ಸಲ್ಲಿಸದಂತೆ ಹಿರಿಯ ನಾಯಕರು ತಡೆ ಹಿಡಿದಿದ್ದು, ಅಲ್ಲಿ ಬಿಗ್ ಬ್ರದರ್ ಡಿಕೇಶಿಯ ಬ್ರೋ ಡಿಕೆ ಸುರೇಶ್ ಅವರು ಸಾಮ್ರಾಟ್ ಅಶೋಕ್ ಅವರಿಗೆ ಪ್ರತಿಸ್ಪರ್ಧಿ ಆಗುವ ಎಲ್ಲಾ ಲಕ್ಷಣ ಗೋಚರಿಸಿದೆ.

ಮುಖ್ಯಮಂತ್ರಿ ಹುದ್ದೆಯ ರೇಸ್‍ನಲ್ಲಿ ಪ್ರಮುಖರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಅವರದೇ ಕ್ಷೇತ್ರದಲ್ಲಿ ಹೈರಾಣು ಮಾಡಲು ಬಿಜೆಪಿ ವ್ಯೂಹ ರಚಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರಂತೆ ಕಂದಾಯ ಸಚಿವ ಆರ್. ಅಶೋಕ್‍ರನ್ನು ಡಿಕೇಶಿ ಎದುರಾಳಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದೆ. ಹಾಗಾಗಿ ಇವತ್ತು ಕನಕಪುರ ಹಾಗೂ ಪದ್ಮನಾಭನಗರ ಎರಡು ಕ್ಷೇತ್ರಗಳಲ್ಲಿ ಅಶೋಕ್‍ರನ್ನು ಅಭ್ಯರ್ಥಿ ಮಾಡಲಾಗಿದೆ. ಅಶೋಕ್ ಅವರು ತಮ್ಮ ಸ್ವಕ್ಷೇತ್ರ ಪದ್ಮನಾಭನಗರದಲ್ಲಿ ಗೆಲ್ಲುವುದು ಸುಲಭ. ಹೀಗಾಗಿ ಕನಕಪುರದಲ್ಲೂ ಸ್ಪರ್ಧೆ ಮಾಡುವುದರಿಂದ ಡಿ.ಕೆ.ಶಿವಕುಮಾರ್ ಅನ್ನು ಯಶಸ್ವಿಯಾಗಿ ಎದುರಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿ ಪಾಳಯದ್ದು.

ಇದಕ್ಕೆ ಡಿಕೆ ಶಿವಕುಮಾರ್ ಸುಮ್ಮನೆ ಕೂತಿಲ್ಲ. ಪಳಗಿದ ರಾಜಕಾರಣಿ ಡಿ ಕೆ ಶಿವಕುಮಾರ್ ಅವರು ಪ್ರತಿ ದಾಳ ಉರುಳಿಸಿದ್ದಾರೆ. ಅಶೋಕ್ ಅವರು ತನ್ನ ನೆಲಕ್ಕೆ ಬಂದು ಕಾಟ ಕೊಡಬಲ್ಲರಾದರೆ, ತಾವ್ಯಾಕೆ ಸುಮ್ಮನಿರಬೇಕು ? ನಾವ್ಯಾಕೆ ಡಿಫೆನ್ಸಿವ್ ಆಟ ಆಡಬೇಕು, ಗೇಮ್ ಅನ್ನು ಅಗ್ರೆಸಿವ್ ಆಗಿಯೇ ಆಡೋಣ ಅಂತ ಅವರು ನಿರ್ಧರಿಸಿದ ಹಾಗಿದೆ. ಹಾಗಾಗಿ ಪದ್ಮನಾಭ ನಗರಕ್ಕೆ, ಆರ್. ಅಶೋಕ್ ಅವರ ಎದುರಾಳಿಯಾಗಿ ತಮ್ಮಡಿಕೆಶಿ ಬ್ರೋ ಡಿಕೆ ಸುರೇಶ್ (DK Suresh to Padmanabha Nagar) ಅವರನ್ನು ಎತ್ತಿ ಕಟ್ಟುವ ಸಾಧ್ಯತೆ ದಟ್ಟವಾಗಿದೆ.

ಚುನಾವಣೆಯಲ್ಲಿ ಸ್ಪರ್ಧೆ ಕಠಿಣವಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್ ತಂತ್ರಗಾರಿಕೆ ಬದಲಿಸಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ಘೋಷಿತ ಹಾಗೂ ಬಿ-ಫಾರಂ ಪಡೆದಿದ್ದ ರಘುನಾಥ್ ನಾಯ್ಡುರಿಗೆ ನಾಮಪತ್ರ ಸಲ್ಲಿಸದಂತೆ ಸೂಚಿಸಿದ್ದಾರೆ. ಡಿ.ಕೆ.ಸುರೇಶ್‍ ರನ್ನು ಪದ್ಮನಾಭ ನಗರದಲ್ಲಿ ಸ್ಪರ್ಧಿಸಲು ಯೋಜನೆ ರೂಪಿತಗೊಂಡಿದೆ. ನಾಳೆ ಅಥವಾ ನಾಡಿದ್ದು ನಾಮ ಪತ್ರ ಸಲ್ಲಿಕೆಯ ಕೊನೆಯ ದಿನ ಡಿ.ಕೆ.ಸುರೇಶ್ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲದೆ, ಪದ್ಮನಾಭನಗರ, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಕುಣಿಗಲ್, ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಉಸ್ತುವಾರಿಯನ್ನು ಡಿ.ಕೆ.ಸುರೇಶ್ ಮತ್ತು ವಿಧಾನಪರಿಷತ್ ರವಿ ನಿರ್ವಹಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಆರ್ ಅಶೋಕ್ ಅವರು ಇಂದು ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದು ಸಾಕಷ್ಟು ಜನ ಸೇರಿದ್ದರು, ಬಿಜೆಪಿ ಉಸ್ತುವಾರಿ ನಾಯಕ ಅರುಣ್‍ಸಿಂಗ್, ಉನ್ನತ ಶಿಕ್ಷಣ ಸಚಿವ ಅಶ್ವಥನಾರಾಯಣ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಶೋಕ್ ಮತ್ತು ಸೋಮಣ್ಣ ಅವರಿಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಘೋಷಣೆ ಮಾಡುತ್ತಿದ ಬಳಿಕವೂ ರಘುನಾಥ್ ನಾಯ್ಡುಗೆ ಬಿ-ಫಾರಂ ಕೊಟ್ಟು ಕಳುಹಿಸಲಾಗಿತ್ತು. ಆದರೆ ಅವರು ಪದ್ಮನಾಭನಗರದಲ್ಲಿ ಪ್ರಬಲ ಅಭ್ಯರ್ಥಿ ಎಂದು ಕಾಣಿಸದಿದ್ದರಿಂದ ಕೊನೆ ಕ್ಷಣದಲ್ಲಿ ತಂತ್ರಗಾರಿಕೆಯನ್ನು ಬದಲಾವಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ಮುಳ್ಳನ್ನು ಇನ್ನೊಂದು ಬಲವಾದ ಮತ್ತು ಚೂಪಾದ ಮುಳ್ಳಿನಿಂದಲೇ ತೆಗೆಯಲು ತಂತ್ರಗಾರ ಡಿಕೆ ಶಿವಕುಮಾರ್ ಪ್ರತಿತಂತ್ರ ಹೂಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.