S.Angara Resign: ಸಿಗದ ಅವಕಾಶ, ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಎಸ್.ಅಂಗಾರ | ಮೂರುವರೇ ದಶಕಗಳ ಕಾಲ ಬೆಂಬಲಿಸಿದ ಕಾರ್ಯಕರ್ತರಿಗೆ ಕೊಟ್ಟ ಸಂದೇಶವೇನು ?

S.Angara Resign : ಮಂಗಳೂರು : ಸುಳ್ಯ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಸಚಿವ ಎಸ್.ಅಂಗಾರ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಕಳೆದ ಮೂರುವರೇ ದಶಕಗಳಿಂದ ಬೆಂಬಲಿಸಿದ ಪಕ್ಷದ ಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ. ಅವಕಾಶ ಸಿಕ್ಕರೆ ಮಾತ್ರ ರಾಜಕಾರಣವಾ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಎಸ್.ಅಂಗಾರ (S.Angara Resign) ಅವರು ಹೇಳಿಕೆ ನೀಡಿ ,ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಿಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಹೇಳಿದ ಅಂಗಾರರು, ನಾನು ಇನ್ನು ರಾಜಕಾರಣದಲ್ಲಿಲ್ಲ. ಚುನಾವಣಾ ಪ್ರಚಾರ ಕಣದಲ್ಲೂ ಇಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ಟಿಕೆಟ್ ಸಿಗುವುದಿಲ್ಲ ಎಂಬ ಮಾಹಿತಿ ದೊರೆತ ಬಳಿಕ ಟಿಕೆಟ್‌ ನೀಡುವಂತೆ ಹೈಕಮಾಂಡ್ ಮಟ್ಟದಲ್ಲಿ ಎಸ್.ಅಂಗಾರ ಅವರು ಪ್ರಯತ್ನಿಸಿದ್ದರು.ಬಳಿಕ ಟಿಕೆಟ್ ನೀಡುವ ಭರವಸೆಯೂ ಎಸ್.ಅಂಗಾರ ಅವರಿಗೆ ಸಿಕ್ಕಿತ್ತು.ಬಳಿಕ ಮಂಗಳವಾರ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದ್ದರು.

ಮಂಗಳವಾರ ಸಂಜೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅಂಗಾರ ಅವರಿಗೆ ಟಿಕೆಟ್ ತಪ್ಪುವುದು ಖಾತ್ರಿಯಾಯಿತು.

ಈ ಹಿನ್ನೆಲೆಯಲ್ಲಿ ಎಸ್.ಅಂಗಾರ ಅವರು ಟಿಕೆಟ್ ತಪ್ಪಿದ ಪರಿಣಾಮ ಬೇಸರಗೊಂಡು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ.ಇದು ಅವರ ಮುಂದಿನ ನಿಗಮ ಮಂಡಳಿ, ವಿಧಾನ ಪರಿಷತ್ ನೇಮಕ ಮೊದಲಾದ ಅವಕಾಶಗಳನ್ನು ಶಾಶ್ವತವಾಗಿ ಮುಚ್ಚಿದ ಹಾಗಾಗಿದೆ.

ಎಸ್.ಅಂಗಾರ ಅವರು ಟಿಕೆಟ್ ಘೋಷಣೆಗೂ ಮುನ್ನ ನಿವೃತ್ತಿ ಪ್ರಕಟಿಸುತ್ತಿದ್ದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಂತೇ ಮಾದರಿಯಾಗುತ್ತಿದ್ದರು ಎನ್ನುವ ಮಾತೂ ಕೇಳಿ ಬರುತ್ತಿದೆ.

Leave A Reply

Your email address will not be published.