ಶಿಕ್ಷಕರಿಗೆ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳಿಸಿದ ಶಿಕ್ಷಣ ಇಲಾಖೆ | ನಿರ್ಲಕ್ಷ್ಯ ಮಾಡುವವರ ವಿರುದ್ಧ ಕಠಿಣ ಕ್ರಮ

Share the Article

ಬೆಂಗಳೂರು: ಮಕ್ಕಳಿಗೆ ಶಾಲೆಗೆ ಬರಲು ಯಾವ ರೀತಿ ಸಮಯವಿದೆಯೋ ಅಂತೆಯೇ ಶಿಕ್ಷಕರಿಗೂ ಇದೆ. ಆದ್ರೆ, ಕೆಲವೊಂದು ಶಿಕ್ಷಕರು ಸರಿಯಾಗಿ ಶಾಲೆಗೆ ಹಾಜರಾಗದೆ, ತಡವಾಗಿ ಬರುತ್ತಾರೆ. ಹೀಗಾಗಿ, ಇಂತಹ ವರ್ತನೆಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಕಡ್ಡಾಯವಾಗಿ ಬಯೋಮೆಟ್ರಿಕ್‌ ಹಾಜರಾತಿ ಹಾಕುವಂತೆ ಸೂಚಿಸಿದೆ.

ಶಾಲೆ ಆರಂಭದ ಸಮಯಕ್ಕಿಂತ 15 ನಿಮಿಷ ಬೇಗ ಬರಬೇಕು ಮತ್ತು ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಶಾಲೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಚಾರಗಳಲ್ಲಿ ಶಿಕ್ಷಕರ ಅಶಿಸ್ತಿನಿಂದ ಮಕ್ಕಳ ಕಲಿಕಾ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಕಚೇರಿ ಸಿಬ್ಬಂದಿ ವರ್ಗ ನಿಗದಿತ ಅವಧಿಗಿಂತ ಕನಿಷ್ಠ 15 ನಿಮಿಷ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಇನ್ನು ರಜೆ ಮೇಲೆ ತೆರಳುವಾಗ ಸಂಬಂಧಪಟ್ಟ ಮೇಲಧಿಕಾರಿಗಳಿಂದ ಪೂರ್ವಾನುಮತಿ ಮಂಜೂರು ಪಡೆದು ತೆರಳಬೇಕು. ವೇತನ ಬಟವಾಡೆ ಅಧಿಕಾರಿಗಳು ತಮ್ಮ ಅಧೀನ ಕಚೇರಿ ಮತ್ತು ಶಾಲೆಗಳ ಬಯೋಮೆಟ್ರಿಕ್‌ ಹಾಜರಾತಿಯನ್ನು ಚೆಕ್‌-ಇನ್‌ ಮತ್ತು ಚೆಕ್‌-ಔಟ್‌ ಹಾರ್ಡ್‌/ಸಾಫ್ಟ್ ದಾಖಲೆಗಳನ್ನು ಪ್ರತಿ ತಿಂಗಳು 25ನೇ ತಾರೀಖೀನೊಳಗೆ ಪಡೆದು ಅದಕ್ಕೆ ಅನುಗುಣವಾಗಿ ವೇತನ ಪಾವತಿಸಲು ತಿಳಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಅವರು ಆಗಸ್ಟ್‌ 12ರಂದು ಮಂಡ್ಯ ಜಿಲ್ಲೆಯ ನೆಲ್ಲಿಗೆರೆ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿಕ್ಷಕರು ಅರ್ಧ ಗಂಟೆ ತಡವಾಗಿ ಹಾಜರಾಗಿದ್ದು, ಶಿಕ್ಷಕರಿಗಾಗಿ ಮಕ್ಕಳು ಕಾಯುತ್ತಿದ್ದ ಘಟನೆಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಆಯುಕ್ತ ಡಾ.ಆರ್‌. ವಿಶಾಲ್‌ ಸುತ್ತೋಲೆ ಹೊರಡಿಸಿದ್ದಾರೆ.

ಬಯೋಮೆಟ್ರಿಕ್‌ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಮತ್ತು ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದೆ. ಹೀಗಿದ್ದೂ ಸಮಯಪಾಲನೆಯನ್ನು ನಿರ್ಲಕ್ಷ್ಯ ಮಾಡುವವರ ವಿರುದ್ಧದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಆಡಳಿತಾತ್ಮಕ ಕ್ರಮಗಳನ್ನು ಜರುಗಿಸಲು ಸೂಚಿಸಿದೆ.

Leave A Reply