ಜಗ್ಗೇಶ್ ಎಂಬ ಹೃದಯವಂತನ ಅಮಾನವೀಯ ವರ್ತನೆ !

ಜಗ್ಗೇಶ್ ಒಳ್ಳೆಯವರು, ಹೃದಯವಂತರು. ಕಾಮಿಡಿ ಮತ್ತು ಟೈಮ್ ಸೆನ್ಸ್ ಅಂತೂ ಅವರ ಜೀನುಗಳಲ್ಲೇ ಇದೆ. ನಿರಂತರವಾಗಿ ಕಾಲೆಳೆಯುತ್ತಾ ಮಾತಾಡಬಲ್ಲರು. ನಾವು ಮಂತ್ರಮುಗ್ಧರಾಗಿ ಕೂತು ನೋಡಬಲ್ಲೆವು-ಕೇಳಬಲ್ಲೆವು. ಅ ವರು ಭಾರತದ ನಟನಾ ಜಗತ್ತು ಕಂಡ ಅಪರೂಪದ ದೈತ್ಯ ಪ್ರತಿಭೆ.
ಸಂಸ್ಕೃತ ಸಾಹಿತ್ಯದಲ್ಲಿ ಕ್ಷೇಮೇಂದ್ರ ಎಂಬ ಕವಿ ವಿಮರ್ಶಕ ಇದ್ದ. ಆತ ಔಚಿತ್ಯ ಶಾಸ್ತ್ರ ಅಂತ ಒಂದು ಗ್ರಂಥವನ್ನು ರಚಿಸಿದ್ದಾನೆ.
ಯಾವುದನ್ನು, ಎಲ್ಲಿ, ಹೇಗೆ, ಎಷ್ಟು ಹೇಳಬೇಕೆನ್ನುವುದು; ಈ ಶಾಸ್ತ್ರದ ಒಟ್ಟು ಸಮ್ಮರಿ. ಅದು ಸಾಹಿತ್ಯದ ಬಗ್ಗೆ ಬರೆದದ್ದು. ಆದರೆ ಜಗ್ಗೇಶ್ ಅವರು ಅದನ್ನು ಒಮ್ಮೆ ಓದಿ, ಸಾಹಿತ್ಯೇತರವಾಗಿ ಅಳವಡಿಸಿಕೊಂಡರೆ ಒಳ್ಳೆಯದು.
ಇವೆಲ್ಲ ಯಾಕೆ ಮಾತಾಡುತ್ತಿದ್ದೇವೆಂದರೆ, ನಿರ್ಭಯ ಹಂತಕರಿಗೆ ಗಲ್ಲು ಶಿಕ್ಷೆ ಇನ್ನೇನು ದಿನಗಳ ದೂರದಲ್ಲಿದೆಯಷ್ಟೆ? ಅವರನ್ನು ಗಲ್ಲುಹಾಕಲು ನಾ ಮುಂದು ತಾ ಮುಂದು ಎಂದು ಜನ ಅಪ್ಲೈ ಮಾಡೋದೇನು? ಇರಲಿ, ಈಗ ಗಲ್ಲು ಹಾಕಲು (ಖುಷಿಯಿಂದ ?? ಕೊಲ್ಲಲು ) ಪವನ್ ಜಲ್ಲಾದ್ ಬರುವುದೆಂದು ಫಿಕ್ಸ್ ಆಗಿದೆ.
ಆತನಿಗೆ ಮಗಳ ಮದುವೆ ಮಾಡದಷ್ಟು ಬಡತನವಂತೆ !ಗಲ್ಲು ಹಾಕಿಯೇ ಆತ ಮಗಳ ಮದುವೆ ಮಾಡಬೇಕಂತೆ !! ಗಲ್ಲು ಶಿಕ್ಷೆ ಆಗದೆ ಹೋಗಿದ್ದಿದ್ದರೆ ಆತ ಹೇಗೆ ಮದುವೆ ಮಾಡುತ್ತಿದ್ದ, ಗೊತ್ತಿಲ್ಲ!!!
ಈಗ, ಜಗ್ಗೇಶ್ ಪವನ್ ಜಲ್ಲಾದ್ ಗೆ ಒಂದು ಲಕ್ಷ ರೂಪಾಯಿ ಘೋಷಿಸಿದ್ದಾರೆ. ಆತನಿಗೆ ಬಡತನವಿದ್ದರೆ, ಜಗ್ಗೇಶ್ ಗೆ ಆತ ನಿಗೆ ಸಹಾಯ ಮಾಡಬೇಕೆನಿಸಿದರೆ, ಒಂದಲ್ಲ ಎರಡು ಲಕ್ಷ ಕೊಡಲಿ. ಆದರೆ ಸಮಯ ಸಂದರ್ಭ ನೋಡಿಕೊಳ್ಳುವುದು ಮುಖ್ಯ.
ಒಲಿಂಪಿಕ್ಸಿನಲ್ಲಿ ಮೆಡಲ್ಲು ಬಂದವನಿಗೆ, ನೂರಕ್ಕೆ ತೊಂಬತ್ತೊಂಬತ್ತು ಪರ್ಸೆಂಟ್ ಪಡೆದುಕೊಂಡು ರಾoಕ್ ಗಳಿಸಿದ ಹುಡುಗಿಗೆ ಇನಾಮು ಘೋಷಿಸಿದoತಹಾ ಸಂದರ್ಭವಲ್ಲ ಇದು. ಸಾವನ್ನು ಸಂಭ್ರಮಿಸುವುದು ಯಾವತ್ತೂ ಸಲ್ಲ. ಸಾವು ನಮಗೆಲ್ಲರಿಗೂ ಬರುತ್ತದೆ : ಒಂದಲ್ಲ ಒಂದು ರೀತಿಯಲ್ಲಿ, ನಮಗರಿವಿಲ್ಲದಂತೆ.
ಅಲ್ಲಿಯತನಕ ನಾವು ನಮ್ಮ ಸಣ್ಣತನವನ್ನು ಜಾರಿಯಲ್ಲಿಟ್ಟಿರುತ್ತೇವೆ ; ಜಗ್ಗೇಶ್ ಥರ !
ಸುದರ್ಶನ್ ಬಿ. ಪ್ರವೀಣ್, ಬೆಳಾಲು