

Sowjanya case : ಹೊಸ ಕನ್ನಡ ನ್ಯೂಸ್: ಕೊನೆಗೂ ಸೌಜನ್ಯಾಳ ಊರಿಗೆ ಸರ್ಕಾರಿ ಬಸ್ ಬಂದಿದೆ. ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ (Sowjanya case) ಬಳಿಕ ಪಾಂಗಾಳ ರಸ್ತೆಯಲ್ಲಿ ಕೊನೆಗೂ ಸರ್ಕಾರ ಬಸ್ ಸಂಚಾರ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಹೊಸ ಬಸ್ ಓಡಾಟಕ್ಕೆ ಇಂದು, ಸೆಪ್ಟಂಬರ್ 1 ರ, ಶುಕ್ರವಾರ ಚಾಲನೆ ದೊರಕಿದೆ.
ಈ ಬಸ್ ಸಂಚಾರಕ್ಕೆ ಸೌಜನ್ಯ ತಾಯಿ ಕುಸುಮಾವತಿ ಚಾಲನೆ ನೀಡಿದರು. ಸೌಜನ್ಯ ಮಾವ ಪುರಂದರ ಗೌಡ, ಅಜ್ಜ ಬಾಬು ಗೌಡ, ರಮೇಶ್, ತುಕಾರಾಮ್, ಶೇಖರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಇಂದು ಬೆಳಗ್ಗೆ 8:15 ಕ್ಕೆ ಧರ್ಮಸ್ಥಳದಿಂದ ಹೊರಟ ಬಸ್ ಪಾಂಗಾಳಕ್ಕೆ ಬಂತು. ಅದು ಅಲ್ಲಿಂದ ಜನರನ್ನು ಕರೆದುಕೊಂಡು ವಾಪಸ್ ಧರ್ಮಸ್ಥಳಕ್ಕೆ ಬರುತ್ತದೆ. ಮತ್ತೆ ಸಂಜೆ 4:15 ಕ್ಕೆ ಧರ್ಮಸ್ಥಳದಿಂದ ಪಾಂಗಳಕ್ಕೆ ಬಂದು ಅಲ್ಲಿಂದ ಬಸ್ ಮತ್ತೆ ಧರ್ಮಸ್ಥಳಕ್ಕೆ ಹೊರಡಲಿದೆ. ಇದೇ ಮೊದಲ ಬಾರಿಗೆ ಬಸ್ ಸಂಚಾರವನ್ನು ಪಾಂಗಾಳಕ್ಕೆ ಕಲ್ಪಿಸಿರುವುದು ವಿಶೇಷ. ಮಂಗಳ ಬಸ್ತ್ ನಿಲ್ದಾಣದಿಂದ ಸೌಜನ್ಯ ಮನೆ ಕೇವಲ ಐನೂರು ಮೀಟರ್ ಗಳ ದೂರದಲ್ಲಿದೆ.
ಧರ್ಮಸ್ಥಳದಿಂದ ಪಾಂಗಳಕ್ಕೆ ಸರಕಾರಿ ಬಸ್ ಚಾಲನೆ ನೀಡಿದ ಸೌಜನ್ಯ ತಾಯಿ
11 ವರ್ಷಗಳ ಹಿಂದೆ ಕಾಲೇಜು ಮುಗಿಸಿ ಪಾಂಗಾಳ ರಸ್ತೆ ಸಮೀಪ ನಡೆದುಕೊಂಡು ಹೋಗುತ್ತಿದ್ದ ಸೌಜನ್ಯಳನ್ನು ಎಳೆದೊಯ್ದು ಅತ್ಯಾಚಾರ ನಡೆಸಿ ಬಳಿಕ ಕೊಲೆಗೈಯಲಾಗಿತ್ತು. ನಂತರ ಆಕೆಯ ಶವವನ್ನು ಮಣ್ಣ ಸಂಕ ಎಂಬಲ್ಲಿ ಎಸೆಯಲಾಗಿತ್ತು. ಕಾಡಿನಿಂದ ಸುತ್ತುವರಿದ ನಿರ್ಜನ ಪ್ರದೇಶವಾದ ಪಂಗಾಳಕ್ಕೆ ಹೋಗುವ ರಸ್ತೆಯ ಈ ಭಾಗಕ್ಕೆ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಬೇಕು, ಕಾಲೇಜಿಗೆ ತೆರಳುವ ಯುವತಿಯರಿಗೆ ರಕ್ಷಣೆ ನೀಡಬೇಕು ಅನ್ನುವುದು ಸ್ಥಳೀಯರ ಬಹುದಿನದ ಬೇಡಿಕೆಯಾಗಿತ್ತು. ಆದರೆ ಯಾವ ‘ಅಧಿಕಾರಿ ‘ ಕೂಡ ಈ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಮೊನ್ನೆ ಬಂದ ಮಕ್ಕಳ ಆಯೋಗದ ಅಧ್ಯಕ್ಷರ ಸೂಚನೆಯ ಮೇರೆಗೆ ಸೌಜನ್ಯ ಊರು ಪಾಂಗಲಕ್ಕೆ ಹೊಸ ಸರ್ಕಾರಿ ಬಸ್ ಬಂದಿದೆ. ಈ ಬಸ್ ವ್ಯವಸ್ಥೆಯನ್ನು ಕಲ್ಪಿಸಿರುವುದು ಸ್ಥಳೀಯರಲ್ಲಿ ಸಂತಸವನ್ನು ಮೂಡಿಸಿದ್ದು, ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜನರು ಕೃತಜ್ಞತೆಯನ್ನು ಹೇಳಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ ಕಬಡ್ಡಿ ಆಟಗಾರ ಸ್ವರಾಜ್ ಸಾವಿಗೆ ಬಿಗ್ ಟ್ವಿಸ್ಟ್ ! ‘ ಮಧ್ಯಾಹ್ನ 2 ಗಂಟೆ ಡೆಡ್ ಲೈನ್ ‘ ರಹಸ್ಯ !!!













