Corruption: ರಾಜ್ಯದಲ್ಲಿ ಇರುವ ಭ್ರಷ್ಟ ಶಾಸಕರ ಪಟ್ಟಿಯನ್ನು ಮಾರ್ಚ್ ಆರರಂದು ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಗ ತಿಳಿಸಿದೆ.

ಕೆಲ ಶಾಸಕರು ಕಾಮಗಾರಿಗೆ ಅನುಮೋದನೆ, ಬಿಲ್ಗಳ ವಿಲೇವಾರಿಗೆ ಹಣ ಪಡೆದು ಭ್ರಷ್ಟಾಚಾರಿಗಳಾಗಿದ್ದಾರೆ. ಇಂತಹ ಶಾಸಕರುಗಳ ಹೆಸರನ್ನು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ (ಮಾ.6) ನಡೆಯಲಿರವ ಬೃಹತ್ ಮುಷ್ಕರದಲ್ಲಿ ಬಿಡುಗಡೆ ಮಾಡುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಮೂಲಗಳು ತಿಳಿಸಿವೆ.
ಪ್ರತಿಭಟನೆ ಕುರಿತು ಇಂದು ಮಂಗಳವಾರ ಪೂರ್ವಭಾವಿ ಸಭೆ ಆಯೋಜಿಸಲಾಗುತ್ತದೆ. ಕಾಮಗಾರಿ ನಿರ್ವಹಿಸಿದ್ದ 37 ಸಾವಿರ ಕೋಟಿ ರೂ. ಬಿಲ್ಗಳಿಗೆ ಬಾಕಿ ಹಣ ಬಿಡುಗಡೆ ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಯಾವ್ಯಾವ ಇಲಾಖೆಯಲ್ಲಿ ಹೇಗೆಲ್ಲಾ ಭ್ರಷ್ಟ್ರಾಚಾರ ನಡೆಯಲಿದೆ ಎಂಬುದರ ಬಗ್ಗೆ ಸಾಕ್ಷಿ ಸಮೇತ ವಿವರವನ್ನು ಬಹಿರಂಗಪಡಿಸಲಾಗುವುದು ಎಂದು ಸಂಘ ಮೂಲಗಳು ತಿಳಿಸಿವೆ.
ಸಭೆ ಕರೆದಾಗ ಸಿಎಂ ಸಿದ್ದರಾಮಯ್ಯ ಅವರಿಗೂ ಭ್ರಷ್ಟ ಶಾಸಕರ ಪಟ್ಟಿಯನ್ನು ಕೊಡಲು ಸಿದ್ದರಿದ್ದೇವೆ. ರಾಜ್ಯದ ಒಟ್ಟು ಎಂಎಲ್ಎಗಳ ಪೈಕಿ ಶೇ.30 ಎಂಎಲ್ಎಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಕಾಮಗಾರಿ ನಿರ್ವಹಿಸಿದ್ದ ಬಾಕಿ ಬಿಲ್ ಬಿಡುಗಡೆ ಮಾಡಲು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕ ಪರ್ಸೆಂಟೇಜ್ ನೀಡಬೇಕಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, 37,370.76 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಗುತ್ತಿಗೆದಾರರ ಕಷ್ಟಗಳನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

