

Nelamangala : ಜ್ಯೋತಿಷಿ ಒಬ್ಬರು ಯುವತಿಗೆ ನಿನಗೆ ಅಲ್ಪ ಆಯಸ್ಸು ಮಾತ್ರ, ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದ ಕಾರಣ ಇದರಿಂದ ಹೆದರಿದ ಯುವತಿಯು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಯಸ್, ವಿದ್ಯಾಜ್ಯೋತಿ ಎಂಬ ಯುವತಿ ತಾನು ಪ್ರೀತಿಸಿದವನೊಡನೆ ಹಸೆ ಮಣೆ ಏರಲು ಮುಂದಾಗಿದ್ದಳು. ಆದರೆ ಇದಕ್ಕೂ ಮುಂಚೆ ಶಾಸ್ತ್ರ ಕೇಳುವ ಎಂದು ಜ್ಯೋತಿಷ್ಯರ ಬಳಿ ಹೋಗಿದ್ದಾಗ ಕೆಲ ದಿನಗಳ ಹಿಂದೆ ಈಕೆ ಅಲ್ಪಾಯುಷಿ ಎಂದು ಜ್ಯೋತಿಷಿಯೋರ್ವರು ಹೇಳಿದ್ದರಂತೆ. ಅಲ್ಪಾಯುಷಿ ಎಂದಿದ್ದ ಜ್ಯೋತಿಷಿ, ಇದಕ್ಕಾಗಿ 9 ದಿನಗಳ ಪೂಜೆ ಮಾಡುವಂತೆ ತಾಕೀತು ಮಾಡಿದ್ದರು. 9ನೇ ದಿನ ದೇವರಿಗೆ ತಾಳಿ ಕೊಡುವಂತೆ ತಿಳಿಸಿದ್ದರು. ಈ ಹಿನ್ನೆಲೆ ಮಾರಮ್ಮ ದೇವರಿಗೆ ತಾಳಿ ಕೊಡಲು ಕುಟುಂಬ ಸಿದ್ಧತೆ ನಡೆಸಿತ್ತು. ಊಟದ ನಂತರ ಯುವತಿ ರೂಮ್ ಸೇರಿದ್ದು, ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಈಕೆ ವರ್ಕ್ ಫ್ರಾಂ ಹೋಮ್ ಮಾಡುತ್ತಿದ್ದಳು. ಹೀಗಾಗಿ ಆಕೆ ಕೆಲಸ ಮಾಡುತ್ತಿರಬಹುದೆಂದು ಮನೆಯವರು ಭಾವಿಸಿದ್ದರು.
ಸಂಜೆ ತಾಯಿ ಕರೆದರೂ ಆಕೆ ಹೊರಬಂದಿರಲಿಲ್ಲ. ಬಳಿಕ 8 ಗಂಟೆ ವೇಳೆಗೆ ದೇವಸ್ಥಾನಕ್ಕೆ ತೆರಳಬೇಕಿದ್ದ ಹಿನ್ನೆಲೆ ವಿದ್ಯಾಜ್ಯೋತಿಯನ್ನು ತಾಯಿ ಮತ್ತೆ ಕರೆದಿದ್ದಾರೆ. ಈ ವೇಳೆಯೂ ಆಕೆ ರೂಮಿನ ಬಾಗಿಲು ತೆಗೆಯದ ಹಿನ್ನೆಲೆ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ಆಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಹೆದರಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.
