

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮೊದಲ ಬಾರಿಗೆ ತೆಂಕುತಿಟ್ಟು ಮತ್ತು ಬಡಗತಿಟ್ಟು ಗಳ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಘೋಷಣೆ ಮಾಡಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮಶೆಟ್ಟಿ ನೇತೃತ್ವದ ನಿಯೋಗವು ಮಂಗಳವಾರ ಸ್ಪೀಕರ್ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ಮಾಡಿತು. ಮೇ ತಿಂಗಳಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರಿಗಾಗಿ ಹಿರಿಯ ವಿಧ್ವಾಂಸರು ಭಾಗವಹಿಸುವ ವಿಶೇಷ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್ ತಿಳಿಸಿದರು.
ವಿಧಾನಸಭಾ ಸಚಿವಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುವುದಾಗಿ ಹೇಳಲಾಗಿದೆ. ಮೇ ತಿಂಗಳಲ್ಲಿ ವಿಧಾನಸೌಧದ ಮೆಟ್ಟಿಲಲ್ಲಿ ಯಕ್ಷಗಾನ ನಡೆಯಲಿದೆ. ಈ ಕಾರ್ಯಕ್ರಮ ಕನ್ನಡ ಸಂಸ್ಕೃತಿಗೆ ಮಹತ್ವದ ಹೆಜ್ಜೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿರುವುದಾಗಿ ವರದಿಯಾಗಿದೆ.