Home » Udupi: ಬಾವಿಗೆ ಬಿದ್ದು ಮೂರು ದಿನ ಅಲ್ಲೇ ಸಿಲುಕಿದ್ದ ವೃದ್ಧ- ಜೀವ ಉಳಿಸಿದ ಗ್ಯಾಸ್ OTP

Udupi: ಬಾವಿಗೆ ಬಿದ್ದು ಮೂರು ದಿನ ಅಲ್ಲೇ ಸಿಲುಕಿದ್ದ ವೃದ್ಧ- ಜೀವ ಉಳಿಸಿದ ಗ್ಯಾಸ್ OTP

0 comments

Udupi : ಬಾವಿಯ ಪಂಪ್ ಸರಿಪಡಿಸಲು ಹೋಗಿ ಆಯತಪ್ಪಿ ಬಾವಿಗೆ ಬಿದ್ದ ವೃದ್ಧರೊಬ್ಬರು ಮೂರು ದಿನಗಳ ಕಾಲ ಬಾವಿ ಒಳಗಡೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಇದೀಗ ಪವಾಡ ಸದೃಶರಾಗಿ ಬದುಕಿ ಬಂದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಚ್ಚರಿ ಏನಂದ್ರೆ ವೃದ್ಧ ಬದುಕಿರೋದು ಗ್ಯಾಸ್‌ ಸಿಲಿಂಡರ್ ಒಟಿಪಿಯಿಂದ ಎಂಬುದು ಕುತೂಹಲ ಮೂಡಿಸಿದೆ.

ಉಡುಪಿಯ ಕಂಬಳಕಟ್ಟೆಯ ನಿವಾಸಿ ಶ್ರೀನಿವಾಸ ಆಚಾರ್ಯ (62) ಕಳೆದ ಶನಿವಾರ ಸಂಜೆ ತಮ್ಮ ಮನೆಯ ಮುಂದಿನ ಬಾವಿಯ ಪಂಪ್ ಸರಿಪಡಿಸುವ ವೇಳೆ 10 ಅಡಿ ಅಗಲ ಹಾಗೂ 20 ಅಡಿ ಆಳದ ಈ ಬಾವಿಯ ಪೈಪಿಗೆ ಕಟ್ಟಿದ್ದ ಹಗ್ಗವನ್ನು ಎಳೆಯುವಾಗ ಅದು ತುಂಡಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಆಚಾರ್ಯರು ನೇರವಾಗಿ ಬಾವಿಯ ನೀರಿಗೆ ಬಿದ್ದಿದ್ದಾರೆ. ಈಜಲು ಯತ್ನಿಸಿದರೂ ದಣಿವಾಗಿದ್ದರಿಂದ, ಅದೃಷ್ಟವಶಾತ್ ಕೈಗೆ ಸಿಕ್ಕ ಫುಟ್‌ಬಾಲ್ ಪೈಪ್ ಹಾಗೂ ಹಳೆಯ ಹಗ್ಗವನ್ನೇ ಆಸರೆಯಾಗಿ ಹಿಡಿದುಕೊಂಡು ಮೂರು ದಿನಗಳ ಕಾಲ ನೀರಿನಲ್ಲೇ ನಿಂತಿದ್ದಾರೆ. ಬಳಿಕ ಆಚಾರ್ಯರ ಜೀವ ಉಳಿಯಲು ಕಾರಣವಾಗಿದ್ದು ಅವರು ಬುಕ್ ಮಾಡಿದ್ದ ಒಂದು ಗ್ಯಾಸ್ ಸಿಲಿಂಡರ್. 

ಆಚಾರ್ಯರು ತಮ್ಮ ಪರಿಚಯಸ್ಥ ಗಣೇಶ್ ಎಂಬವರಿಂದ ಗ್ಯಾಸ್ ಪಡೆದಿದ್ದರು. ತಾನು ಬುಕ್ ಮಾಡಿದ ಸಿಲಿಂಡರ್ ಬಂದ ಮೇಲೆ ಮರಳಿಸುವುದಾಗಿ ಹೇಳಿದ್ದರು. ಆದರೆ, ಮೂರು ದಿನಗಳಾದರೂ ಆಚಾರ್ ಫೋನ್ ಕರೆಗೆ ಸಿಗದಿದ್ದಾಗ ಗಣೇಶ್ ಅವರಿಗೆ ಸಂಶಯ ಬಂದು ಕೂಡಲೇ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿದಾಗ, ನಾವು ಆಚಾರ್ಯರ ಮನೆಗೆ ಹೋಗಿದ್ದೆವು. ಅವರು ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ಆತಂಕಗೊಂಡ ಗಣೇಶ್, ನೆರೆಹೊರೆಯವರಿಗೆ ಪರಿಶೀಲಿಸಲು ತಿಳಿಸಿದ್ದಾರೆ. ಬಾವಿಯ ಹತ್ತಿರ ಹೋಗಿ ನೋಡಿದಾಗ ಆಚಾರ್ಯರು ನಿತ್ರಾಣ ಸ್ಥಿತಿಯಲ್ಲಿ ಬಾವಿಯೊಳಗೆ ಪತ್ತೆಯಾಗಿದ್ದಾರೆ.  ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಹಗ್ಗ ಮತ್ತು ಏಣಿಯ ಸಹಾಯದಿಂದ ಬಾವಿಗಿಳಿದ ಸಿಬ್ಬಂದಿ, ಸಂಪೂರ್ಣ ನಿತ್ರಾಣಗೊಂಡಿದ್ದ ಆಚಾರ್ಯರನ್ನು ಸುರಕ್ಷಿತವಾಗಿ ಮೇಲೆತ್ತಿದರು. ಮೇಲೆ ತಂದ ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ದೇವರೇ ಗ್ಯಾಸ್ ರೂಪದಲ್ಲಿ ಬಂದು ನನ್ನನ್ನು ಉಳಿಸಿದ ಎಂದು ಆಚಾರ್ಯರು ಭಾವುಕರಾಗಿ ನುಡಿದಿದ್ದಾರೆ.

banner

You may also like