

ಶಾಲೆಗೆ ಹೋಗುವ ಹುಡುಗರ ಗುಂಪಿನ ನಡುವೆ ಜಗಳ ನಡೆದು ಅದರಲ್ಲಿ ಹುಡುಗನೊಬ್ಬನನ್ನು ತನ್ನ ಸ್ನೇಹಿತನೇ ಗುಂಡು ಹಾರಿಸಿ ಹತ್ಯೆಗೈದಿರುವ ಭೀಕರ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.
ಅಕ್ಷಯ್ ಪಬ್ಲಿಕ್ ಸ್ಕೂಲ್ನ ಕೆಲವು ಹುಡುಗರ ನಡುವೆ ಜಗಳ ನಡೆದಿದ್ದು, ಈ ವೇಳೆ ಹುಡುಗನೊಬ್ಬನಿಗೆ ತನ್ನ ಸ್ನೇಹಿತನೇ ಗುಂಡು ಹಾರಿಸಿದ್ದಾನೆ. ನಂತರ ಗುಂಡಿನ ಸದ್ದು ಕೇಳಿದ ಅಕ್ಕಪಕ್ಕದ ನಿವಾಸಿಗಳು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿ, ಹುಡುಗನನ್ನು ತಕ್ಷಣವೇ ತಾರಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹುಡುಗ ಕೊನೆಯುಸಿರೆಳೆದಿದ್ದಾನೆ.
ಮೃತ ಹುಡುಗನನ್ನು ಖುರ್ಷಿದ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಹುಡುಗನ ಸ್ನೇಹಿತರು ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರಿಗೆ ಪ್ರಕರಣದ ಪ್ರಮುಖ ಆರೋಪಿ ಸಾಹಿಲ್ ಎಂದು ತಿಳಿದುಬಂದಿದ್ದು, ಆತನನ್ನು ಬಂಧಿಸಿ, ಆತನ ಬಳಿ ಇದ್ದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.













