

Chikkamaglur : ಚಿಕ್ಕಮಗಳೂರಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ (ದತ್ತಪೀಠ) ವಿಚಾರದಲ್ಲಿ ಇದೀಗ ಮತ್ತೊಂದು ಹೊಸ ವಿವಾದ ಭುಗಿಲಿದ್ದಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ದತ್ತಪೀಠದ ಗುಹೆಯೊಳಗೆ ಹೊಸ ಆಚರಣೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಜಿಲ್ಲಾಡಳಿತದ ವಿರುದ್ಧ ವಿಎಚ್ಪಿ ಮತ್ತು ಬಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಹೌದು, ದತ್ತಪೀಠದ ಗುಹೆಯೊಳಗೆ ‘ಕಲಮೆ ತಯ್ಯಬಾ’ ಎಂಬ ಹೊಸ ಆಚರಣೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ನಿಯಮಬಾಹಿರವಾಗಿ ಮುಜಾವರ್ಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿವೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್, ಗುರುದತ್ತಾತ್ರೇಯ ಪೀಠದಲ್ಲಿ ಹಿಂದೆ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಯಾವುದೇ ರೀತಿಯ ಹೊಸ ಆಚರಣೆಗೆ ಅವಕಾಶ ನೀಡಿರಲಿಲ್ಲ. ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದ ನಂತರದಲ್ಲಿ ಅಪರ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಗಳಾಗಿದ್ದು, ಜ.23ರಂದು ಹೊಸದಾಗಿ ಕಲಮೆ ತಯ್ಯಬಾ ಆಚರಣೆ ಮಾಡಿದ್ದು, ಈ ಆಚರಣೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿರುವುದು ಕಾನೂನು ಬಾಹಿರವಾಗಿದೆ. ನಮಗೆ ಗುಹೆಯ ಮುಂಭಾಗ ಹೋಮ ಮಾಡಲು ಅವಕಾಶ ನೀಡದ ಜಿಲ್ಲಾಡಳಿತ, ಈಗ ಗುಹೆಯೊಳಗೆ ಹೊಸ ಆಚರಣೆಗೆ ಹೇಗೆ ಅವಕಾಶ ನೀಡಿತು?” ಎಂದು ವಿಎಚ್ಪಿ ಮುಖಂಡರು ಪ್ರಶ್ನಿಸಿದ್ದು, ದತ್ತಪೀಠದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿಯುತ್ತಿದ್ದಂತೆಯೇ ಇಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ದತ್ತಪೀಠದಲ್ಲಿ ನಡೆಯುತ್ತಿರುವ ಹೊಸ ಆಚರಣೆಗಳ ಬಗ್ಗೆ ತನಿಖೆ ನಡೆಸಿ, ಸುಪ್ರೀಂ ಕೋರ್ಟ್ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಗ್ರಹಿಸಿದ್ದಾರೆ.













