

ಮಂಗಳೂರು: ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಮಂಗಳೂರು ಭಾಗದ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿರುವ ಘಟನೆ ನಡೆದಿದ್ದು, ಈ ದೃಶ್ಯ ಕಂಡು ಭಕ್ತರಲ್ಲಿ ಅಚ್ಚರಿಯನ್ನು ಮೂಡಿಸಿದೆ.
ನೇಮೋತ್ಸವದ ಸಂದರ್ಭದಲ್ಲಿ ಪಿಲಿಚಂಡಿ ದೈವಕ್ಕೆ ಗಗ್ಗರ ಇಡುವಾಗ ದೈವಸ್ಥಾನ ಪ್ರದೇಶದಲ್ಲಿ ಏಕಾಏಕಿ ದೊಡ್ಡ ಸದ್ದು ಕೇಳಿ ಬಂದಿದ್ದು, ಅಲ್ಲಿದ್ದವರು ಏನಿದು ಸದ್ದು ಎಂದು ಆತಂಕಗೊಂಡರು. ನಂತರ ನೋಡಿದಾಗ ನೇಮೋತ್ಸವ ನಡೆಯುತ್ತಿದ್ದ ಸ್ಥಳದ ಮುಂಭಾಗದಲ್ಲಿರುವ ಹೊಳ್ಳರ ಚಾವಡಿಯಲ್ಲಿದ್ದ ದೈವದ ತೂಗುಯ್ಯಾಲೆ ತನ್ನಿಂದ ತಾನೇ ತೂಗುತ್ತಿರುವುದನ್ನು ಕಣ್ಣಾರೆ ಕಂಡು ಅಲ್ಲಿ ನೆರೆದವರು ಆಶ್ಚರ್ಯಗೊಂಡರು.
ದೈವದ ಪವಾಡವನ್ನು ಕಣ್ಣಾರೆ ಕಂಡ ಜನರು ತನ್ನ ಕಾರಣಿಕ ಶಕ್ತಿಯನ್ನು ದೈವ ಪ್ರದರ್ಶನ ಮಾಡಿದೆ ಎಂದು ನಂಬಿದ್ದಾರೆ. ದೈವ ಪವಾಡದ ಅನುಭವವನ್ನು ಹಂಚಿದ್ದಾರೆ.