

ಚಿಕ್ಕಮಗಳೂರು ನಗರದ ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಸುಮಾರು 6.30 ರಿಂದ 7 ಗಂಟೆಯವರೆಗೆ ಸುಪ್ರಭಾತ ಹಾಗೂ ಜಾಗಂಟೆ ಮೊಳಗಿಸಲಾಗುತ್ತಿದ್ದು, ಬೆಳಿಗ್ಗೆ 15 ನಿಮಿಷ ಮತ್ತು ಸಂಜೆ 15 ನಿಮಿಷ ಜಾಗಂಟೆ ಹಾಕುವ ಕಾರಣ ಈ ಶಬ್ದದಿಂದ ತೊಂದರೆ ಆಗುತ್ತಿದೆ ಎಂದು ಫಾರೂಕ್ ಎನ್ನುವ ವ್ಯಕ್ತಿ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ದೇವಸ್ಥಾನದ ಅರ್ಚಕರಾದ ಜಗದೀಶ್ ಭಟ್ ಅವರಿಗೆ ಜಾಗಂಟೆ ಶಬ್ದ ಹೊರಗೆ ಕೇಳಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೆಂದು ತಿಳಿದು ಬಂದಿದೆ.
ಜಾಗಂಟೆಯನ್ನು ಗರ್ಭಗುಡಿಯಲ್ಲಿ ಇಟ್ಟುಕೊಳ್ಳುವುದು ಹಾಗೂ ದೇವಸ್ಥಾನದ ಸುತ್ತ ಎತ್ತರದ ಗೋಡೆ ನಿರ್ಮಿಸುವಂತೆ ಸಲಹೆ ನೀಡಲಾಗಿದೆ ಎನ್ನಲಾಗಿದೆ. ಇತರರ ಆಚರಣೆಗಳಿಗೆ ನಾವು ಗೌರವ ನೀಡುತ್ತೇವೆ. ನಮ್ಮ ಆಚರಣೆಗೂ ಗೌರವ ನೀಡಬೇಕು ಎಂದು ಅರ್ಚಕ ಜಗದೀಶ್ ಭಟ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.