Forest Dept : ಕಾಡು ನಾಶದಿಂದಾಗಿ ಮಾನವ ಹಾಗೂ ವನ್ಯಜೀವಿಯ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಹೀಗಾಗಿ ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಮಾಸ್ಟರ್ ಪ್ಲಾನ್ ಒಂದನ್ನು ಹೆಣೆದಿದ್ದು, ಕಾಡುಪ್ರಾಣಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸಲು ಮುಂದಾಗಿದೆ


ವನ್ಯಜೀವಿ ಹಾಗೂ ಮಾನವ ಸಂಘರ್ಷ ರಾಜ್ಯದಲ್ಲಿ ಹೆಚ್ಚುತ್ತಿದೆ. ಕೆಲವು ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಜಾಸ್ತಿ ಆಗಿದೆ. ಹೆಚ್ಚುತ್ತಿರುವ ಪ್ರಾಣಿಗಳ ಸಂಖ್ಯೆಗೆ ಸ್ವಲ್ಪವಾದರೂ ಕಡಿವಾಣ ಹಾಕುವ ಅವಶ್ಯಕತೆ ಇದೆ. ಹೀಗಾಗಿ ಕಾಡು ಪ್ರಾಣಿಗಳ ಸಂತತಿ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಅಲ್ಲದೆ ಸಂಘರ್ಷದಿಂದ ಮಾನವ ಹಾಗೂ ಪ್ರಾಣಿಗಳ ಜೀವಗಳಿಗೆ ಹಾನಿ ಆಗ್ತಾ ಇದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಅಥವಾ ಅದಕ್ಕೆ ಸಂತಾನ ನಿಯಂತ್ರಣ ಚುಚ್ಚುಮದ್ದು ಕೊಡುವ ಪ್ರಸ್ತಾವನೆ ಇದೆ. ಇದು ಕೇವಲ ಪ್ರಸ್ತಾವನೆ ಮಾತ್ರ, ನಿರ್ಧಾರ ಅಲ್ಲ. ಇನ್ನೂ ಪ್ರಾಣಿಗಳ ಪಟ್ಟಿ ಮಾಡಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡುತ್ತಿದ್ದೇವೆ ಎಂದರು.
ಜೊತೆಗೆ ಸಂತಾನಹರಣ ವಿಚಾರದ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯಕ್ಕೂ ಒಂದು ಪ್ರಸ್ತಾವನೆ ಸಲ್ಲಿಸಬೇಕಿದೆ. ನಮ್ಮ ಉದ್ದೇಶ ವನ್ಯಜೀವಿಗಳ ಸಂರಕ್ಷಣೆನು ಆಗಬೇಕು, ಜೊತೆಯಲ್ಲಿ ಮಾನವ ಸಂರಕ್ಷಣೆ ಆಗುವಂತದ್ದು ಬಹಳ ಅವಶ್ಯಕತೆ ಇದೆ. ಇದರ ಬಗ್ಗೆ ಇನ್ನು ತೀರ್ಮಾನ ಏನು ಮಾಡಿಲ್ಲ, ಚಿಂತನೆ ಮಾತ್ರ ಇದೆ. ಇದು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಆಗಬೇಕು ಎಂದು ಈ ಪ್ರಸ್ತಾಪ ಇಟ್ಟಿದ್ದೇನೆ ಎಂದಿದ್ದಾರೆ.

