Hubballi : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಹೆಚ್ಚಿನ ಅಂಕ ಬಾರದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ಉಣಕಲ್ನ ಸಿದ್ಧಕಲ್ಯಾಣ ನಗರದಲ್ಲಿ ನಡೆದಿದೆ.


ಶ್ರಾವಣಿ ಮಾರುತಿ ಕಾಳೆ (18) ಎಂಬ ವಿದ್ಯಾರ್ಥಿನಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ತನ್ನ ಕನಕದಾಸ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಶ್ರಾವಣಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಳು. ಫಸ್ಟ್ ಕ್ಲಾಸ್ ಬಂದಿದ್ದಳು. ಅಂದರೆ 71% ಅಂಕಗಳು ಬಂದಿದ್ದವು. ಆದರೂ ಕೂಡ ಇದು ಸಾಲದೇ ಸಾವಿನ ಮನೆ ಸೇರಿದ್ದಾಳೆ.
ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದರೂ, ತಾನು ಗುರಿ ಇಟ್ಟುಕೊಂಡಿದ್ದಕ್ಕಿಂತ ಕಡಿಮೆ ಅಂಕ ಬಂದಿದ್ದರಿಂದ ಶ್ರಾವಣಿ ತೀವ್ರವಾಗಿ ಮನನೊಂದಿದ್ದಳು ಎನ್ನಲಾಗಿದೆ. ಇದೇ ಮಾನಸಿಕ ಹತಾಶೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವಿದ್ಯಾರ್ಥಿನಿಯ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.
ಶ್ರಾವಣಿ ಸಿದ್ಧಕಲ್ಯಾಣ ನಗರದ ನಿವಾಸಿ, ಉಣಕಲ್ ಪ್ರದೇಶದಲ್ಲಿ ಅವಳ ಕುಟುಂಬವಿದೆ. ವಿದ್ಯಾನಗರದ ಕನಕದಾಸ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಈಕೆ ಸ್ನೇಹಿತರೊಂದಿಗೆ ಓದುವುದು, ಹರಟೆ ಹೊಡೆಯುವುದು ಅವಳಿಗೆ ಇಷ್ಟ. ಇದರಿಂದಾಗಿಯೇ ತನ್ನ ಸ್ನೇಹಿತರೊಂದಿಗೆ ನೂರಕ್ಕೆ ನೂರು ಪ್ರತಿಶತ ತೆಗೆದುಕೊಳ್ಳುತ್ತೇನೆ ಎಂದು ಚಾಲೆಂಜ್ ಮಾಡಿದ್ದಳು ಎಂಬುದು ಬೆಳಕಿಗೆ ಬಂದಿದೆ. ಆದರೆ ಫಲಿತಾಂಶದ ಒತ್ತಡ ಅವಳನ್ನು ಆಘಾತಕ್ಕೆ ದೂಡಿದೆ. ಹೀಗಾಗಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.

