

Tumakuru : ಶಾಲಾ ಕೊಠಡಿ ಬಾಗಿಲಿಗೆ ಸಿಲುಕಿ ವಿದ್ಯಾರ್ಥಿನಿ ಬಲಗೈನ ಎರಡು ಬೆರಳು ತುಂಡಾಗಿದೆ. ಬಾಲಕಿ ನೋವಿನಿಂದ ನರಳುತ್ತಿದ್ದರೂ ರಕ್ತ ಸೋರುತಿದ್ದರು ಕೂಡ ಶಾಲೆಯ ಶಿಕ್ಷಕರು ಒಂದಿಂಚು ಕರುಣೆ ತೋರದೆ, ಆಕೆಗೆ ಸೂಕ್ತ ಚಿಕಿತ್ಸೆಯನ್ನು ನೀಡದೆ ಕೈ ಬೆರಳನ್ನು ಕಸದ ಬುಟ್ಟಿಗೆ ಎಸೆದು ವಿಕೃತಿ ಮೆರೆದ ಘಟನೆ ತುಮಕೂರಿನ ಗೂಳೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಗೂಳೂರು ಗ್ರಾಮದ ಅಂಬಿಕಾ, ಬಸವರಾಜು ದಂಪತಿ ಪುತ್ರಿ ಚಿನ್ಮಯಿ 1ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಫೆ.9ರಂದು ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ತೆರಳುವಾಗ ಸರತಿ ಸಾಲಿನಲ್ಲಿ ನಿಂತಿದ್ದಳು. ಈ ವೇಳೆ ಕಬ್ಬಿಣದ ಬಾಗಿಲಿನ ಸಂದಿಯಲ್ಲಿ ಕೈ ಇಟ್ಟಿದ್ದಳು. ಹಿಂದೆ ನಿಂತಿದ್ದ ಮಕ್ಕಳು ಬಾಗಿಲನ್ನು ಜೋರಾಗಿ ತಳ್ಳಿದ್ದಾರೆ. ಇದರಿಂದ ಚಿನ್ಮಯಿ ಎರಡು ಬೆರಳು ತುಂಡಾಗಿದೆ. ಅಪಘಾತದ ನಂತರವೂ ಶಿಕ್ಷಕರು ವಿದ್ಯಾರ್ಥಿನಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೇ, ಶಾಲೆಯಲ್ಲಿಯೇ ಕೇವಲ ಬ್ಯಾಂಡೇಜ್ ಸುತ್ತಿ, ನೀರು ಹಾಕಿ ಅಲ್ಲೇ ಕುಳ್ಳಿರಿಸಿ ನಿರ್ಲಕ್ಷ್ಯ ವಹಿಸಿದ್ದಾರೆ. ಅದರಲ್ಲೂ ಇನ್ನೂ ಗಂಭೀರ ಸಂಗತಿ ಎಂದರೆ, ತುಂಡಾಗಿ ಬಿದ್ದ ಕೈ ಬೆರಳುಗಳನ್ನು ಚಿಕಿತ್ಸೆಗೆ ಸಂರಕ್ಷಿಸುವ ಬದಲು, ಶಿಕ್ಷಕರು ಅದನ್ನು ಕಸಕ್ಕೆ ಎಸೆದಿದ್ದಾರೆ.
ಇನ್ನೂ ಬಾಲಕಿಯ ಪೋಷಕರಿಬ್ಬರೂ ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರಿಗೆ ಘಟನೆಯ ಬಗ್ಗೆ ಕೇಳಿದಾಗ ನಿರ್ಲಕ್ಷ್ಯ ತೋರಿದ್ದಲ್ಲದೆ ಪೋಷಕರಿಗೆ 2000 ರೂ.ಗಳನ್ನು ಫೋನ್ ಪೇ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ. ಪೋಷಕರು ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಕಟ್ ಆದ ಬೆರಳುಗಳನ್ನು ತರಲು ಸೂಚಿಸಿದ್ದರು. ಆಗ ಮಾತ್ರ ಬೆರಳುಗಳನ್ನು ಮೊದಲಿಂತೆ ಕೂಡಿಸಬಹುದೆಂದು ಹೇಳಿದ್ದರು. ಶಾಲೆಗೆ ಮರಳಿ ಬಂದ ಪೋಷಕರು, ಬೆರಳುಗಳ ಬಗ್ಗೆ ಪ್ರಶ್ನಿಸಿದಾಗ, ಶಾಲೆಯ ಮಕ್ಕಳು ರಕ್ತ ನೋಡಿ ಭಯಪಡುತ್ತಾರೆ, ಆದ್ದರಿಂದ ಬೆರಳುಗಳನ್ನು ಕಸಕ್ಕೆ ಹಾಕಿದ್ದೇವೆ ಎಂದು ಶಿಕ್ಷಕರು ಹೇಳಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಅಮಾನವೀಯ ಘಟನೆ ಬಗ್ಗೆ ತುಮಕೂರು ತಾಲೂಕು ಬಿಇಓಗೆ ಮಾಹಿತಿ ನೀಡಿದರೂ, ಅವರು ಉಡಾಫೆಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಮತ್ತು ಸಾರ್ವಜನಿಕರು, ಶಾಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ದೂರು ದಾಖಲಿಸಿದ್ದಾರೆ.













