Home » ರಾಮಕುಂಜದಲ್ಲಿ ಬಾವಿ ತೋಡುವಾಗ ಸ್ಪೋಟಕ ಬಳಕೆ: ಸಮೀಪದ ಮನೆಗಳಿಗೆ ಹಾನಿ

ರಾಮಕುಂಜದಲ್ಲಿ ಬಾವಿ ತೋಡುವಾಗ ಸ್ಪೋಟಕ ಬಳಕೆ: ಸಮೀಪದ ಮನೆಗಳಿಗೆ ಹಾನಿ

ಪ್ರಕರಣ ದಾಖಲು

0 comments

ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಬಾವಿ ತೋಡುವ ಸಂದರ್ಭದಲ್ಲಿ ಸ್ಪೋಟಕ ಬಳಕೆ ಮಾಡಿದ ಪರಿಣಾಮ ಸಮೀಪದ ಮನೆಗಳಿಗೆ ಹಾನಿಯಾಗಿರುವ ಘಟನೆ ಮಾ.8ರಂದು ನಡೆದಿದೆ.

ಮೈಸೂರು ನಿವಾಸಿ ಸೋಮಶೇಖರ್ ಅವರು ತಮ್ಮ ಸಂಬಂಧಿಕರಿಂದ 23 ಸೆಂಟ್ಸ್ ಜಾಗ ಖರೀದಿಸಿದ್ದು, ಅದರಲ್ಲಿ ಅಡಿಕೆ ಮರಗಳಿವೆ. ಈ ಜಾಗದಲ್ಲಿ ನೀರಿಗಾಗಿ ಬಾವಿ ತೋಡುವ ಕೆಲಸ ಆರಂಭಿಸಲಾಗಿತ್ತು. ಸುಮಾರು 15 ಅಡಿ ಆಳದಲ್ಲಿ ಕಲ್ಲು ಸಿಕ್ಕಿದ ಕಾರಣ ಸ್ಪೋಟಕ ಬಳಸುವ ಮೂಲಕ ಕಲ್ಲು ಒಡೆಯಲು ಮುಂದಾಗಿದ್ದರು.

ಮಾ.8ರಂದು ಸ್ಪೋಟಕ ಸಿಡಿಸಿದ ಪರಿಣಾಮ ಸಮೀಪದ ವಾಮನ ಮೂಲ್ಯ ಹಾಗೂ ಕೆ.ಟಿ. ಮೋಹನ ಅವರ ಮನೆಗಳ ಗೋಡೆಗಳಲ್ಲಿ ಬಿರುಕುಗಳು ಉಂಟಾಗಿವೆ. ಈ ಸಂಬಂಧ ಸ್ಥಳೀಯರು ಕಡಬ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಕಡಬ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ಬಾವಿಯೊಳಗೆ ಸ್ಪೋಟವಾಗದೆ ಉಳಿದಿದ್ದ ಮದ್ದುಗುಂಡುಗಳನ್ನು ತೆರವುಗೊಳಿಸಲು ಮಾ.10ರಂದು ಬೆಳಿಗ್ಗೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಸಹ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಡಬ ಎಸ್‌ಐ ಜಂಬೂರಾಜ್ ಹಾಗೂ ಎಫ್‌ಎಸ್ಎಲ್ ತಂಡದ ಸಿಬ್ಬಂದಿಗಳು ಉಪಸ್ಥಿತರಿದ್ದರು.

banner

You may also like