

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ನೆರೆಯ ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್ ನಡುವಿನ ನೇರ ವಿಮಾನಯಾನ ಸೇವೆಯು ಮಾರ್ಚ್ 1 ರಿಂದ ಅಧಿಕೃತವಾಗಿ ಪುನರಾಂಭಗೊಳ್ಳಲಿದೆ.
ಈ ವಿಮಾನ ಹಾರಾಟ ಏರ್ ಇಂಡಿಯಾ ಎಕ್ಸ್ಪ್ರೆಸ್ ವತಿಯಿಂದ ನಡೆಯಲಿದೆ. ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ವ್ಯವಹಾರ ನಡೆಸಿ ವಿಮಾನಯಾನ ಪುನಾರಂಭಿಸುವಂತೆ ಮನವಿ ಸಲ್ಲಿಸಿದ್ದರು.
ವಾರದ ಎರಡು ದಿನ ಅಂದರೆ ಪ್ರತಿ ಭಾನುವಾರ ಮತ್ತು ಮಂಗಳವಾರ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಾರಾಟ ನಡೆಸಲಿದೆ. ಈ ಸೇವೆಯಿಂದ ಪ್ರಯಾಣ ಸಮಯ ಉಳಿತಾಯವಾಗುವುದಲ್ಲದೆ, ಅನಿವಾಸಿ ಭಾರತೀಯರಿಗೆ ತಮ್ಮ ಊರುಗಳಿಗೆ ನೇರವಾಗಿ ಪ್ರಯಾಣಿಸಲು ಬಹಳಷ್ಟು ಅನುಕೂಲವಾಗಲಿದೆ.
“ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆಯು ಅಚಾನಕ್ ಆಗಿ ಸ್ಥಗಿತಗೊಂಡ ಕಾರಣ ಮಸ್ಕತ್ನಲ್ಲಿ ನೆಲೆಸಿರುವ ನಮ್ಮ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರಿಗೆ ಸಂಕಷ್ಟವಾಗಿತ್ತು. ಮಸ್ಕತ್ನಿಂದ ಮಂಗಳೂರಿಗೆ ಬರಬೇಕಾದವರು ದೆಹಲಿ, ಮುಂಬೈ, ಕಣ್ಣೂರು ಮೂಲಕ ಸುತ್ತಿ ಬಳಸಿ ಪ್ರಯಾಣ ಮಾಡಬೇಕಿತ್ತು. ಈ ಸಮಸ್ಯೆ ಕುರಿತು ನಿರಂತರ ಪ್ರಯತ್ನ ಹಾಗೂ ಮನವಿಗೆ ಸ್ಪಂದಿಸಿ ಮಾರ್ಚ್ 1 ರಿಂದ ಈ ಸೇವೆ ಪುನರಾರಂಭಿಸಲು ಕ್ರಮ ಕೈಗೊಂಡ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ರಾಮಮೋಹನ್ ನಾಯ್ಡು ಅವರಿಗೆ ಸಮಸ್ತ ಅನಿವಾಸಿ ಕರಾವಳಿಗರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
