

Rajanikanth: ಇತ್ತೀಚೆಗೆ ಬೀದಿಯಲ್ಲಿ ಕಸ ಗುಡಿಸುವಾಗ ತಮಗೆ ಸಿಕ್ಕಿದ್ದ ಸುಮಾರು 55 ಲಕ್ಷ ರು. ಮೌಲ್ಯದ 360 ಗ್ರಾಂ ಚಿನ್ನವನ್ನು ಅದರ ಮಾಲೀಕರಿಗೆ ಮರಳಿಸಿ ಚೆನ್ನೈ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಪದ್ಮಾ ಅವರು ದೇಶಾದ್ಯಂತ ಫೇಮಸ್ ಆಗಿದ್ದರು. ಎಸ್.ಪದ್ಮಾ ಅವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅವರನ್ನು ನಟ ರಜನೀಕಾಂತ್ ತಮ್ಮ ಮನೆಗೆ ಕರೆಸಿ ಸನ್ಮಾನಿಸಿದ್ದಾರೆ.
ಹೌದು, ಪೌರಕಾರ್ಮಿಕ ಮಹಿಳೆ ಎಸ್.ಪದ್ಮಾ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಕಳೆದ ತಿಂಗಳು ಕಸದ ಬುಟ್ಟಿಯಲ್ಲಿ ಸಿಕ್ಕ 45 ಲಕ್ಷ ಮೌಲ್ಯದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು. ಪದ್ಮಾ ಅವರ ಕಾರ್ಯವನ್ನು ಮೆಚ್ಚಿರುವ ನಟ ಸೂಪರ್ ಸ್ಟಾರ್ ರಜನಿಕಾಂತ್, ಪದ್ಮಾ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಅವರಿಗೆ ಓಂ ಹೆಸರಿನ ಪದಕ, 16 ಗ್ರಾಂನ ಚಿನ್ನದ ಸರ, ಶಾಲು ಹಾಕಿ ರಜನಿ ಸನ್ಮಾನಿಸಿದ್ದಾರೆ. ಇದೇ ಕಾರಣಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸ್ಟಾಲಿನ್ ಕೂಡಾ ಪದ್ಮಾರಿಗೆ ₹1 ಲಕ್ಷ ನೀಡಿ ಗೌರವಿಸಿದ್ದರು.
ರಜನಿಕಾಂತ್ ಭೇಟಿ ಬಳಿಕ ಮಾತನಾಡಿರುವ ಪದ್ಮಾ, ರಜನಿಕಾಂತ್ ಅವರನ್ನು ನಾನು ಭೇಟಿಯಾಗುತ್ತೇನೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ. ನನಗೆ ರೋಮಾಂಚನವಾಯಿತು. ರಜನಿಕಾಂತ್ ಭೇಟಿಯಾಗಿದ್ದು ತುಂಬಾ ಖುಷಿ ತಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.













