Chitradurga: 1ನೇ ತರಗತಿಯ ವಿದ್ಯಾರ್ಥಿನಿ (Student) ಒಬ್ಬಳಿಗೆ ಶಾಲಾ ಆವರಣದಲ್ಲಿ ವಿಷಕಾರಿ ನಾಗರಹಾವು (Cobra snake) ಕಚ್ಚಿದ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

ಹಾವು ಕಚ್ಚಿದಾಗ ತೀವ್ರ ನೋವಿನಿಂದ ಬಾಲಕಿ ಅಳುತ್ತಾ ಚೀರಾಡಿದಾಗ, ಸ್ಥಳಕ್ಕೆ ಕೂಡಲೇ ಧಾವಿಸಿದ ಶಿಕ್ಷಕರು (Teacher) ಪರಿಸ್ಥಿತಿ ಗಂಭೀರತೆಯನ್ನು ಅರಿತು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅಪಾಯ ಹೆಚ್ಚಾಗಬಹುದು ಎಂದು ಅಂದಾಜಿಸಿದ ಶಿಕ್ಷಕ ರವಿಶಂಕರ್ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹಾವು ಕಚ್ಚಿದ ಭಾಗದಿಂದ ವಿಷವನ್ನು ಬಾಯಿಯಿಂದ ಹೊರತೆಗೆದು ಬಾಲಕಿಯ ಪ್ರಾಣ ಉಳಿಯುವಂತೆ ಮಾಡಿದ್ದಾರೆ.
ನಂತರ ಸೃಷ್ಠಿಯನ್ನು ಉತ್ತಮ ಚಿಕಿತ್ಸೆಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಸಾಗಿಸಲಾಯಿತು. ಬಾಲಕಿಯನ್ನು ರಕ್ಷಿಸುವ ವೇಳೆ ವಿಷದ ಅಂಶವನ್ನು ತಮ್ಮ ಬಾಯಿಯಿಂದ ಹೊರತೆಗೆದ ಶಿಕ್ಷಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದ್ದುದರಿಂದ ರವಿಶಂಕರ್ ಅವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
