Home » RCB: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಮ್ಯಾಚ್ ನಡೆಯುತ್ತಾ? ಗೃಹ ಸಚಿವರು ಹೇಳಿದ್ದೇನು?

RCB: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಮ್ಯಾಚ್ ನಡೆಯುತ್ತಾ? ಗೃಹ ಸಚಿವರು ಹೇಳಿದ್ದೇನು?

0 comments

RCB: ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಸಂಭ್ರಮಾಚರಣೆ ದುರಂತದ ಕಾರಣ ಈ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮ್ಯಾಚ್ ನಡೆಯುತ್ತದೆಯೋ, ಇಲ್ಲವೋ ಎಂಬುದು ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ. ಒಮ್ಮೊಮ್ಮೆ ಮ್ಯಾಚ್ ನಡೆಯುತ್ತದೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಮಾಡಿದರೆ ಮತ್ತೆ ಕೆಲವೊಮ್ಮೆ ಈ ಬಗ್ಗೆ ನಿರ್ಧಾರವಾಗಿಲ್ಲ ಎಂದು ಹೇಳುವುದು ಉಂಟು. ಆದರೆ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಐಪಿಎಲ್-2026ರ ಆರ್‌ಸಿಬಿ ಮ್ಯಾಚ್ ನಡೆಯುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ಮಾತನಾಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಆರ್‌ಸಿಬಿ ಮ್ಯಾಚ್ ಆಡಿಸುವ ಬಗ್ಗೆ ನಡೆಯುತ್ತಿದ್ದ ಹಗ್ಗಜಗ್ಗಾಟ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪಂದ್ಯಗಳಿಗೆ ಅವಕಾಶ ನೀಡುವ ಸಂಬಂಧ ಬುಧವಾರ(ಫೆ.11) ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಆರ್‌ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗ ಇಂದು ಬೆಳಗ್ಗೆ ಗೃಹ ಸಚಿವರ ಜತೆ ಸಮಾಲೋಚನೆ ನಡೆಸಿತು. ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಾವಳಿ ಆಡಿಸುವ ಸಂಬಂಧ ಚರ್ಚೆ ನಡೆಸಲಾಯ್ತು. ನ್ಯಾ.ಕುನ್ಹಾ ಸಮಿತಿಯ ಶಿಫಾರಸು ಅಳವಡಿಸಿಕೊಂಡಿರುವ ಬಗ್ಗೆ ಭರವಸೆ ಕೊಟ್ಟ ನಿಯೋಗ ಆದಷ್ಟು ಬೇಗ ಪಂದ್ಯಾವಳಿಗಳನ್ನು ಆಡಿಸಲು ಮನವಿ ಮಾಡಿತು. ಬಳಿಕ‌ ಮಾತಾಡಿದ ವೆಂಕಟೇಶ್ ಪ್ರಸಾದ್, ಸದ್ಯದಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಸಚಿವರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವೆಂಕಟೇಶ್ ಪ್ರಸಾದ್, ಇಂದು ನಾವು ಗೃಹ ಸಚಿವರ ಭೇಟಿ ಮಾಡಿದ್ದೇವೆ. ಆರ್‌ಸಿಬಿ ಮ್ಯಾಚ್ ನಡೆಸುವ ಸಂಬಂಧ ಜಂಟಿ ನಿಯೋಗ ಬಂದಿದ್ದೆವು. ನಾನು, ರಾಜೇಶ್ ಮೆನನ್ ಹಾಗೂ ವಿನಯ್ ಮೃಂತ್ಯುಜಯ ಒಟ್ಟಿಗೆ ಆಗಮಿಸಿದ್ದೆವು. ಗೃಹ ಸಚಿವರ ಜತೆ ಒಳ್ಳೆಯ ರೀತಿಯಲ್ಲಿ ಚರ್ಚೆ ನಡೆದಿದೆ. ಇದೇ ಫೆಬ್ರವರಿ 12 ರಂದು ಸಮಿತಿ ಜತೆ ಚರ್ಚಿಸಿ, ಒಂದು ನಿರ್ಧಾರಕ್ಕೆ ಬರುವುದಾಗಿ ಗೃಹ ಸಚಿವರು ತಿಳಿಸಿದರು. ಆದಷ್ಟು ಬೇಗ ಸ್ಥಳ ನಿರ್ಧಾರ ಆಗಬೇಕು. ಹೀಗಾಗಿ, ಬೇಗ ಒಂದು ತೀರ್ಮಾನ ತಗೊಳ್ಳಿ ಅಂತ ಗೃಹಸಚಿವರಲ್ಲಿ ಮನವಿ ಮಾಡಿದ್ದೇವೆ. ಆರ್‌ಸಿಬಿ ಅಭಿಮಾನಿಗಳಿಗೆ ಖಂಡಿತ ಗುಡ್ ನ್ಯೂಸ್ ಸಿಗುತ್ತದೆ ಎಂದು ಭಾವಿಸಿದ್ದೇವೆ ಎಂದು  ತಿಳಿಸಿದರು.

banner

You may also like