Lakkundi: : ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿತ್ತು. ಬಳಿಕ ಮನೆಯವರು ಸ್ವ ಇಚ್ಛೆಯಿಂದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಇದೀಗ ಕುಟುಂಬ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿತ್ತು. ಇದಾದ ಮೇಲೆ ಈ ಭಾಗದಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ಇದೀಗ ಈ ಚಿನ್ನದ ಬೆಲೆ ಎಷ್ಟು, ಇದು ಯಾವ ಕಾಲದ್ದು ಎಂಬ ವಿಚಾರ ಬಯಲಾಗಿದೆ.

ನಿಧಿಯ ಕಾಲಮಾನ ಯಾವುದು ಮತ್ತು ಮೌಲ್ಯಮಾಪನ ಮಾಡುವುದಕ್ಕಾಗಿ ಸರ್ಕಾರವು ಇತಿಹಾಸ ತಜ್ಞರಾದ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ 6 ಜನ ಸದಸ್ಯರ ತಂಡವನ್ನು ರಚನೆ ಮಾಡಲಾಗಿತ್ತು. ತಂಡವು ಪರಿಶೀಲನೆ ನಡೆಸಿದ್ದು, ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇನ್ನು ಈ ಆಭರಣಗಳಲ್ಲಿ ನೀಲಮಣಿ, ಪಚ್ಚೆ ಹಾಗೂ ಹವಳದಂತಹ ಅಮೂಲ್ಯ ಹರಳುಗಳನ್ನು ಅಳವಡಿಸಲಾಗಿದೆ. ಅವುಗಳ ಕಲಾತ್ಮಕತೆ ವಿಶೇಷವಾಗಿದ್ದು, ಪತ್ತೆಯಾದ ಚಿನ್ನದ ತೂಕ ಸುಮಾರು 470 ಗ್ರಾಂ ಇದೆ. ಇಂದಿನ ಮಾರುಕಟ್ಟೆಯ ಬೆಲೆಗೆ ಹೋಲಿಕೆ ಮಾಡಿದರೆ 80 ಲಕ್ಷ ರೂಪಾಯಿಗೂ ಹೆಚ್ಚು ಎಂದು ತಜ್ಞರ ಸಮಿತಿ ಹೇಳಿದೆ. ಇನ್ನೂ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನವು ಸಾಮಾನ್ಯ ಚಿನ್ನವಲ್ಲ ಎಂದು ಹೇಳಲಾಗಿದೆ. ಪುರಾತನ ಕಾಲದ ಐತಿಹಾಸಿಕ ಆಭರಣಗಳಾಗಿದ್ದು, ಇದರ ಮೌಲ್ಯವು ಕನಿಷ್ಠ 10 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.
ನಿಧಿ ಪರಿಶೀಲನಾ ಸಮಿತಿ ಅಧ್ಯಕ್ಷ, ಇತಿಹಾಸ ತಜ್ಞರಾದ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ಇದೀಗ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯು ಬರೋಬ್ಬರಿ 500 ರಿಂದ 600 ವರ್ಷ ಹಳೆಯದ್ದಾಗಿದೆ. ಇದರ ಮೌಲ್ಯವು ಈಗ ಇರುವುದಕ್ಕಿಂತ 10 ಪಟ್ಟು ಹೆಚ್ಚು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು “ಲಕ್ಕುಂಡಿಯಲ್ಲಿ ಪತ್ತೆಯಾದ ಆಭರಣಗಳ ಆಕಾರ, ವಿನ್ಯಾಸ ಮತ್ತು ತಯಾರಿಕೆಯ ಶೈಲಿಗಳನ್ನು ಪರಿಶೀಲನೆ ಮಾಡಿದ ಮೇಳೆ ಇದು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟಕ್ಕೆ ಸೇರಿದ್ದವಾಗಿವೆ ಎನ್ನುವುದು ಖಚಿತವಾಗುತ್ತದೆ. ಇನ್ನು ಈ ಭಾಗದಲ್ಲಿ ನಡೆಸಲಾಗಿದ್ದ ಉತ್ಖನನ ಕಾರ್ಯದ ಸಂದರ್ಭದಲ್ಲಿ ಪತ್ತೆಯಾದ ಆಭರಣಗಳಲ್ಲಿ ಸಿಂಹ ಅಥವಾ ಕೀರ್ತಿ ಮುಖದ ವಿನ್ಯಾಸಗಳು ಇವೆ. ಇದು ಹೆಣ್ಣು ದೇವರಿಗೆ ಅರ್ಪಿಸಲು ತಯಾರಿಸಲಾದ ಆಭರಣವಾಗಿರಬಹುದು. ಮುಸ್ಲಿಂ ರಾಜರ ದಾಳಿಗಳ ಕಾಲದಲ್ಲಿ ಸುರಕ್ಷತೆಗಾಗಿ ಮುಚ್ಚಿಟ್ಟ ಚಿನ್ನವಾಗಿರುವ ಸಾಧ್ಯತೆಯೂ ಇದೆ” ಎಂದು ಹೇಳಿದ್ದಾರೆ.

