

Bigg Boss-12 : ಬಿಗ್ ಬಾಸ್ ಮಾಜಿ ಸ್ಪರ್ದಿಯಾಗಿರುವ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಸೀಸನ್ 12 ರಲ್ಲಿ ಯಾರು ಮೊದಲ ರನ್ನರ್ ಅಪ್ ಆಗುತ್ತಾರೋ ಅವರಿಗೆ ಎರಡು ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದರು. ಇದೀಗ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್- 12ರ ಮೊದಲ ರನ್ನರ್ ಅಪ್ ಆಗಿದ್ದು ಅವರಿಗೆ ತಾವು ಘೋಷಣೆ ಮಾಡಿದಂತೆ ಹಣವನ್ನು ನೀಡಲು ಮುಂದಾಗಿದ್ದಾರೆ.
ಹೌದು, ವರ್ತೂರು ಸಂತೋಷ್ (Bigg Boss varthur santhosh), ಕೊನೆಯ ಕ್ಷಣದವರೆಗೆ ಬಂದು, ಗೆಲುವು ಸಾಧಿಸಿಲ್ಲ ಎಂದರೆ ತುಂಬಾ ನೋವಾಗುತ್ತದೆ. ಆದ್ದರಿಂದ ರನ್ನರ್ ಅಪ್ಗೆ ಹಣವನ್ನು ನೀಡಲು ಆಸೆ ಪಟ್ಟಿದ್ದೇನೆ. ಆದರೆ ಬಿಗ್ಬಾಸ್ ವೇದಿಕೆಯ ಮೇಲೆ ನನ್ನನ್ನು ಕರೆಯಬೇಕು. ಜೊತೆಗೆ ಹಳ್ಳಿಕಾರ್ ಹೋರಿಗಳನ್ನು ಕೂಡ ವೇದಿಕೆ ಮೇಲೆ ಕರೆಸಬೇಕು. ಆಗ ಅಲ್ಲಿಯೇ ರನ್ನರ್ ಅಪ್ಗೆ ಹಣವನ್ನು ನೀಡುತ್ತೇನೆ. ಒಂದು ವೇಳೆ ಬಿಗ್ಬಾಸ್ ವೇದಿಕೆ ಮೇಲೆ ನನ್ನನ್ನು ಕರೆದಿಲ್ಲ ಎಂತಾದರೆ, ರನ್ನರ್ ಅಪ್ಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ ಎನ್ನುವ ಮೂಲಕ, ವೇದಿಕೆಯ ಮೇಲೆ ಕರೆದರಷ್ಟೇ ಹಣವನ್ನು ಕೊಡುವುದಾಗಿ ಹೇಳಿದ್ದರು.
ಆದರೆ ಅದನ್ನು ಬಿಗ್ಬಾಸ್ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ, ಕೊನೆಯದಾಗಿ ವರ್ತೂರು ಸಂತೋಷ್ ಅವರು, ಮೊದಲ ರನ್ನರ್ ಅಪ್ಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಅದರಂತೆಯೇ, ಇದೀಗ ರಕ್ಷಿತಾ ಶೆಟ್ಟಿ ಅವರಿಗೆ ಕರೆ ಮಾಡಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ವರ್ತೂರು ಸಂತೋಷ್ ಬಗ್ಗೆ ಅರಿವಿಲ್ಲದ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಪರಿಚಯವನ್ನು ಫೋನ್ ಮೂಲಕ ಮಾಡಿಕೊಂಡಿರುವ ವರ್ತೂರು ಅವರು ಹಣ ನೀಡುವುದಾಗಿ ಹೇಳಿದ್ದಾರೆ. ರಕ್ಷಿತಾ ಶೆಟ್ಟಿಗೆ ಫೋನ್ ಮಾಡಿ ಬೆಂಗಳೂರಿನಲ್ಲಿ ತಮ್ಮನ್ನು ಸಂಪರ್ಕಿಸುವಂತೆಯೂ ಅವರು ಮನವಿ ಮಾಡಿದ್ದಾರೆ. ಅಲ್ಲದೆ ಮನೆಗೆ ಬಂದಾಗ, ಮೀನು ತರಿಸಿ ಇಡುತ್ತೇನೆ. ಫ್ರೈ ಮಾಡಿಕೊಡಬೇಕು ಎಂದು ವರ್ತೂರು ಹೇಳಿದ್ದಾರೆ. ಅದಕ್ಕೆ ರಕ್ಷಿತಾ ಶೆಟ್ಟಿ ಒಪ್ಪಿಕೊಂಡಿದ್ದಾರೆ.













