Home Entertainment ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಯಂತ್‌ ಕಾಯ್ಕಿಣಿ...

ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಯಂತ್‌ ಕಾಯ್ಕಿಣಿ ಮಾತು

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು ಚಿತ್ರೋತ್ಸವ ವೇದಿಕೆ: ʼಗೀತರಚನೆ ಎನ್ನುವುದು ಕಲಿಯೋದು, ಕಲಿಸೋದಲ್ಲ. ಕನ್ನಡ ಕಾವ್ಯ, ಸಾಹಿತ್ಯ ಓದಬೇಕು. ಜನಜೀವನ ನೋಡಬೇಕು. ಬರವಣಿಗೆ ಎನ್ನುವುದು ನಮ್ಮ ಸುಪ್ತಮನಸ್ಸಿನಿಂದ ಬರುವಂತದ್ದು. ಅದಕ್ಕೆ ಯಾವುದೇ ತರಬೇತಿ, ಕಾರ್ಯಾಗಾರ ಇರುವುದಿಲ್ಲʼ ಎಂದು ಖ್ಯಾತ ಸಾಹಿತಿ ಮತ್ತು ಚಿತ್ರಸಾಹಿತಿ ಜಯಂತ್‌ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼಗೀತರಚನೆಯನ್ನು ಕಲಿಸುವುದಕ್ಕಾಗುವುದಿಲ್ಲ. ಕನಸ್ಸಿನಲ್ಲಿ ಒಮ್ಮೊಮ್ಮೆ ಅಮೂರ್ತವಾಗಿ ಏನೇನೋ ಕಾಣುತ್ತದಲ್ಲ, ಗೀತರಚನೆಯೂ ಹಾಗೆಯೇ. ನಿರ್ದೇಶನ, ನಟನೆಯ ತರಹ ಗೀತರಚನೆಗೆ ತರಬೇತಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ತರಬೇತಿ ಪಡೆದರೆ, ಜಿಮಿನಂದ ಬಂದ ಒಂದೇ ತರಹ ದೇಹಗಳ ಹಾಗೆ ಕಾಣುತ್ತದೆ. ಬ್ಯೂಟಿ ಪಾರ್ಲರ್‌ನಿಂದ ಬಂದ ವಧುವಿನ ಹಾಗೆ ಎಲ್ಲವೂ ಒಂದೇ ರೀತಿ ಕಾಣುತ್ತದೆ. ನಿಮ್ಮ ಛಾಪು ಮೂಡಿಸಬೇಕೆಂದರೆ ಸ್ವತಂತ್ರವಾಗಿ ಬರೆಯುವುದಕ್ಕೆ ಕಲಿಯಬೇಕುʼ ಎಂದು ಹೇಳಿದರು.

ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿರಬೇಕು ಎಂದ ಅವರು, ʼಹಳೆಯದೆಲ್ಲಾ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪು. ಅಂದರೆ ನಾವು ಸಹ ಮೊದಲ ಹಾಗಿಲ್ಲ ಎಂದರ್ಥ. ಎಲ್ಲಾ ಕಡೆ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲು ನಮ್ಮೂರಿನಲ್ಲಿ ಸಾಕಷ್ಟು ಹಿರಿಯರಿದ್ದರು. ಈಗ ನಾನೇ ಹಿರಿಯ ಎನ್ನುವಂತಾಗಿದೆ. ಸಮಯ ಬದಲಾಗುತ್ತಿರುತ್ತದೆ. ತಂತ್ರಜ್ಞಾನ ಬೆಳೆಯುತ್ತಿದೆ. ನಾವು ಸಹ ಬದಲಾಗಬೇಕಾಗುತ್ತದೆ. ಹಳೆಯದೇ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪುʼ ಎಂದು ಅವರು ಹೇಳಿದರು.

ತಾವು ಮೊದಲಿಂದಲೂ ಸಿನಿಮಾ ಹಾಡುಗಳ ಪ್ರೇಮಿ ಎಂದ ಜಯಂತ್‌ ಕಾಯ್ಕಿಣಿ, ʼನಾವೆಲ್ಲಾ ಹಾಡುಗಳನ್ನು ಗುನುಗಿ ಬೆಳೆದವರು. ಗೊಣಗುವುದಕ್ಕಿಂತ ಗುನುಗುವುದು ಮೇಲು ಎಂದು ನಮ್ಮ ತಂದೆ ಹೇಳುತ್ತಿದ್ದರು. ನಾನು ೫೨ನೇ ವಯಸ್ಸಿಗೆ ಸಿನಿಮಾದಲ್ಲಿ ಗೀತರಚನೆಕಾರನಾದೆ. ಯೌವ್ವನದಲ್ಲಿದ್ದಾಗ ಗಂಭಿರವಾಗಿ ʼಕೋಟಿತೀರ್ಥʼ ಅಂತ ಬರೆದೆ. ವಯಸ್ಸಾದ ಮೇಲೆ ಸಿನಿಮಾ ಹಾಡುಗಳನ್ನು ಬರೆಯುವಂತಾಯಿತುʼ ಎಂದರು.

ಆರಂಭದಲ್ಲಿ ಸಿನಿಮಾ ಹಾಡುಗಳನ್ನು ಬರೆಯುವಾಗ ಒಂದು ಉಡಾಫೆ ಇತ್ತು ಎಂದ ಅವರು, ʼಸಿನಿಮಾ ಹಾಡುಗಳನ್ನು ಬರೆಯುವುದು ಬಹಳ ಸುಲಭ ಎಂದು ಭಾವಿಸಿದ್ದೆ. ಹಾಡುಗಳನ್ನು ಬರೆಯುವುದಕ್ಕೆ ಶುರು ಮಾಡಿದ ಮೇಲೆ ಅದರ ಕಷ್ಟ ಗೊತ್ತಾಯ್ತು. ಸಿನಿಮಾದಲ್ಲಿ ಟ್ಯೂನ್‌ ಹಾಕಿದ ಮೇಲೆ, ಮೀಟರ್‌ಗೆ ತಕ್ಕ ಹಾಗೆ ಸಾಹಿತ್ಯವನ್ನು ರಚಿಸಲಾಗುತ್ತದೆ. ಅದು ದೊಡ್ಡ ಸವಾಲಾಗಿತ್ತು. ನಮ್ಮಲ್ಲಿ ಕೋಟ್ಯಂತರ ಹಾಡುಗಳಿವೆ. ಅದರಲ್ಲಿ ವಿಭಿನ್ನವಾದುದನ್ನೇನೋ ಬರೆಯಬೇಕು. ಅದರಲ್ಲಿ ಶೇ. ೯೭ರಷ್ಟು ಪ್ರೇಮಗೀತೆಗಳು. ಅದರಲ್ಲಿ ವಿಭಿನ್ನವಾಗಿ ಅದೆಷ್ಟು ಬರೆಯೋಕೆ ಸಾಧ್ಯ? ಒಲವು, ನಲಿವು, ಚೆಲುವು, ಹಸಿರು, ಉಸಿರು … ಈ ಪದಗಳನ್ನೇ ಪುನಃ ಬಳಸಬೇಕು. ಅದನ್ನು ಹೊರತುಪಡಿಸಿ, ಹೊಸ ಎಕ್ಸ್‌ಪ್ರೆಶನ್‌ ಸೃಷ್ಟಿಸುವುದು ನಿಜಕ್ಕೂ ಸವಾಲಿನ ಕೆಲಸʼ ಎಂದು ಹೇಳಿದರು.

ಸಿನಿಮಾಗಳಿಗೆ ಹಾಡುಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ ಅನುಕೂಲವೇ ಆಯಿತು ಎನ್ನುವ ಅವರು, ʼಚಿತ್ರಗೀತೆಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ, ನಾನು ಸಿನಿಮಾಗೆ ಹೆಚ್ಚು ಬರೆಯುತ್ತಿರುವುದರ ಬಗ್ಗೆ ಹಿತೈಷಿಗಳು ಬೇಸರ ವ್ಯಕ್ತಪಡಿಸಿದರು. ಸಿನಿಮಾ ಹಾಡುಗಳನ್ನು ಬರೆಯುತ್ತಿದ್ದೇನೆ ಎಂದು ನಾನು ಬೇರೆ ಸಾಹಿತ್ಯವನ್ನು ಕಡೆಗಣಿಸಿಲ್ಲ. ನನ್ನ ಬೇರೆ ಮರವಣಿಗೆಯನ್ನು ಮುಂದುವರೆಸಿದ್ದೇನೆ. ಇದರಿಂದ ಅನಾಮಿಕ ಶೋತೃಗಳು ಹೆಚ್ಚಾಗುವುದರ ಜೊತೆಗೆ ಒಂಥರಾ Reverse Osmosis ಪ್ರಕ್ರಿಯೆ ಶುರುವಾಯ್ತು. ನನ್ನ ಕಥೆ, ಕವನ ಸಂಕಲನಗಳನ್ನು ಓದದ ಬಹಳಷ್ಟು ಹೊಸ ತಲೆಮಾರಿನವರು, ಹಾಡುಗಳನ್ನು ಕೇಳಿ ಇಷ್ಟಪಟ್ಟು, ನನ್ನ ಪುಸ್ತಕಗಳನ್ನು ಕೊಂಡು ಓದಿದರು. ಇದರಿಂದ ನನ್ನ ಪುಸ್ತಕಗಳ ಮರುಮುದ್ರಣವಾದಂತಾಯಿತುʼ ಎಂದರು.
ವ್ಯಕ್ತ, ಶ್ರಾವ್ಯ ಮತ್ತು ದೃಶ್ಯ ಹೀಗೆ ಮೂರೂ ಗುಣಗಳಿರುವ ಒಂದು ಅಪರೂಪದ ಮಾಧ್ಯಮ ಸಿನಿಮಾ ಎಂದ ಅವರು, ʼಸಿನಿಮಾದಲ್ಲಿ ವ್ಯಕ್ತ, ಶ್ರಾವ್ಯ ಮತ್ತು ದೃಶ್ಯ ಎಂಬ ಮೂರೂ ಗುಣಗಳೂ ಇವೆ. ಒಬ್ಬ ನಿರ್ದೇಶಕನಿಗೆ ಇದರ ಅರಿವು ಮತ್ತು ಹಿಡಿತವಿದ್ದರೆ, ತೆರೆಯ ಮೇಲೆ ಅದ್ಭುತವಾದುದನ್ನು ಸೃಷ್ಟಿಸಬಹುದುʼ ಎಂದರು.

ತಮಗೆ ಸಿನಿಮಾ ಆಸಕ್ತಿ ಬಾಲ್ಯದಲ್ಲೇ ಹುಟ್ಟಿತ್ತು ಮತ್ತು ಅದಕ್ಕೆ ಮೂಲ ಕಾರಣ ತಮ್ಮೂರಿನ ಟೂರಿಂಗ್‌ ಟಾಕೀಸ್‌ ಕಾರಣ ಎಂದ ಅವರು, ʼಬಾಲ್ಯದಲ್ಲಿ ʼಕಠಾರಿ ವೀರʼ, ʼಬೀದಿ ಬಸವಣ್ಣʼ, ʼಚೂರಿ ಚಿಕ್ಕಣ್ಣʼ, ʼಚಂದವಳ್ಳಿಯ ತೋಟʼ ಮುಂತಾದ ಚಿತ್ರಗಳನ್ನು ನೋಡಿ ಬೆಳೆದಂತೆ. ಜಾವೇದ್‌ ಅಖ್ತರ್‌ ಅವರು ಹೇಳಿದಂತೆ ಸಿನಿಮಾನೇ ನಮ್ಮ ಧರ್ಮ. ಹಲವು ಆದರ್ಶ ಗುಣಗಳನ್ನು ಸಿನಿಮಾದಿಂದ ನೋಡಿ ಕಲಿತವರು ನಾವು. ʼದೀವಾರ್‌ʼ ಚಿತ್ರದಲ್ಲಿ ಬರುವ ʼಮೇರೇ ಪಾಸ್‌ ಮಾʼ ಎನ್ನುವಂತೆ, ನನ್ನ ಹತ್ತಿರ ಏನಿದೆ ಎಂದು ಕೇಳಿದರೆ, ʼಮೇರೆ ಪಾಸ್‌ ಸಿನಿಮಾ ಹೇ …ʼ ಎನ್ನುತ್ತೇನೆ. ಭಾರತದಲ್ಲಿ ನಾವು ಸಿನಿಮಾದ ಜೊತೆಗೆ ಬೆರೆತು ಹೋಗಿದ್ದೇವೆʼ ಎಂದರು.

ಇತ್ತೀಚಿನ ವರ್ಷಗಳಲ್ಲಿ ʼಪೊನ್ನಿಯನ್‌ ಸೆಲ್ವನ್‌ʼ ಚಿತ್ರದ ಕನ್ನಡ ಡಬ್ಬಿಂಗ್‌ ಅವತರಣಿಕೆಗೆ ಸಾಹಿತ್ಯ ರಚಿಸಿದ್ದು ಸವಾಲಿನ ಕೆಲಸವಾಗಿತ್ತು ಎಂದ ಅವರು, ʼಎ.ಆರ್‌.ರೆಹಮಾನ್‌ ಸಂಗೀತ ನಿರ್ದೇಶನದ ‘ಪೊನ್ನಿಯನ್‌ ಸೆಲ್ವನ್‌ʼ ಸಿನಿಮಾದ ಎರಡೂ ಭಾಗಗಳು ಸೇರಿ 14 ಹಾಡುಗಳಿವೆ. ನಾನು ಭಾಷಾಂತರ ಮಾಡುವುದಿಲ್ಲ, ಸ್ವಂತವಾಗಿ ಬರೆಯುವುದಕ್ಕೆ ಅವಕಾಶ ಕೊಟ್ಟರೆ ಬರೆಯುವುದಾಗಿ ನಿರ್ದೇಶಕ ಮಣಿರತ್ನಂ ಅವರಿಗೆ ಹೇಳಿದ್ದೆ. ಅವರು ಸಹ ಸನ್ನಿವೇಶ ಹೇಳಿ, ಅದಕ್ಕೆ ಪೂರಕವಾಗಿ ಬರೆಯುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು. ಕನ್ನಡದಲ್ಲಿ ಪ್ರೀತಿ, ಪ್ರೇಮ ಎನ್ನಲು ತುಟಿಗಳನ್ನು ತಾಗಿಸಬೇಕು. ತಮಿಳಿನಲ್ಲಿ ‘ಕಾದಲ್‌ʼ ಎನ್ನುವಾಗ ತುಟಿಗಳೇ ತಾಗುವುದಿಲ್ಲ. ತುಟಿಗಳು ಸೇರಿಸದೆ ಪ್ರೀತಿ ಹೇಗೆ ಮಾಡುತ್ತೀರಿ ಎಂದು ಮಣಿರತ್ನಂ ಅವರನ್ನು ತಮಾಷೆ ಮಾಡಿದ್ದಾಗಿʼ ನೆನಪಿಸಿಕೊಂಡರು.

ಈ ಕಾರ್ಯಕ್ರಮವನ್ನು ಪ್ರಶಾಂತ್‌ ಪಂಡಿತ್‌ ನಡೆಸಿಕೊಟ್ಟರು.