

ಬೆಳಗಾವಿಯ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ, ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಮಹಾಕವಿʼ ಚಿತ್ರವು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮೊದಲು ಮಾತನಾಡಿದ ನಿರ್ಮಾಪಕರಾದ ಪ್ರಭು, ʼವೃತ್ತಿಯಲ್ಲಿ ವಕೀಲನಾಗಿರುವ ನಾನು ಬೆಳಗಾವಿಯವನು. ನನಗೆ ನನ್ನ ಸ್ನೇಹಿತನ ಮೂಲಕ ಬರಗೂರು ರಾಮಚಂದ್ರಪ್ಪ ಅವರ ಪರಿಚಯವಾಯಿತು. ಅವರು ನನಗೆ ʼಮಹಾಕವಿʼ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಯಿತು. ಈಗ ಚಿತ್ರ ಸಿದ್ದವಾಗಿದ್ದು, ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ನಮ್ಮ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಬಹಳ ಖುಷಿಯಾಗಿದೆ. ಈ ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ ಕನ್ನಡವಲ್ಲದೆ, ಬೇರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಚನೆ ಇದೆʼ ಎಂದರು.
ಗುರುಗಳಾದ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 25ನೇ ಚಿತ್ರದ ನಾಯಕಿಯಾಗಿ ನಟಿಸಿದ್ದು ಹಾಗೂ ನಮ್ಮ ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದ್ದು ಎರಡು ಬಹಳ ಸಂತೋಷ ತಂದಿದೆ ಎಂದು ನಾಯಕಿ ಅನುಷಾ ರೈ ಹೇಳಿದರು.
ʼಮಹಾಕವಿʼ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. ಬರಗೂರು ರಾಮಚಂದ್ರಪ್ಪನವರು ಚಿತ್ರಕಥೆ , ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕಿಶೋರ್ ಅವರು ಪಂಪನ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರದಲ್ಲಿ ನಟಿಸಿರುವ ರಾಜಪ್ಪ ದಳವಾಯಿ ತಿಳಿಸಿದರು.
ಛಾಯಾಗ್ರಾಹಕ ನಾಗರಾಜ ಆದವಾನಿ ಮಾತನಾಡಿ, ʼಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 25 ಚಿತ್ರಗಳಲ್ಲಿ ಈ ಚಿತ್ರವೂ ಸೇರಿದಂತೆ 18 ಚಿತ್ರಗಳಿಗೆ ನಾನೇ ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸಿದ್ದೇನೆʼ ಎಂದರು.













